"ಭಾರತದ ಪ್ರತಿಷ್ಠೆಗಾಗಿರುವ ಧಕ್ಕೆಗೆ ಕ್ರಿಕೆಟಿಗರ ಟ್ವೀಟ್ಗಳು ಪರಿಹಾರವಲ್ಲ"
ನವದೆಹಲಿ, ಫೆಬ್ರುವರಿ 04: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಪಾಪ್ ಗಾಯಕಿ ರಿಹಾನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಸೇರಿ ಹಲವು ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡುತ್ತಿದ್ದಂತೆ ಸರ್ಕಾರ ಗರಂ ಆಗಿತ್ತು. ಕೇಂದ್ರ ವಿದೇಶಿ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸೆಲೆಬ್ರೆಟಿಗಳು ಪ್ರತಿಕ್ರಿಯೆ ನೀಡುವ ಮುನ್ನ ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಈ ಸಂಗತಿ ಬೆನ್ನಲ್ಲೇ ವಿದೇಶಿ ಸೆಲೆಬ್ರಿಟಿಗಳು ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವು ಬಾಲಿವುಡ್ ನಟ ನಟಿಯರು ಹಾಗೂ ಕ್ರಿಕೆಟಿಗರು ಟ್ವೀಟ್ ಮಾಡಿದ್ದರು.
'ದೇಶದ್ರೋಹ' ಪ್ರಕರಣ: ಸುಪ್ರೀಂಕೋರ್ಟ್ ಮೊರೆ ಹೋದ ಶಶಿ ತರೂರ್, ಪತ್ರಕರ್ತ ಸರ್ದೇಸಾಯಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್, ಭಾರತದ ಪ್ರತಿಷ್ಠೆ, ಚಿತ್ರಣಕ್ಕೆ ಆಗಿರುವ ಧಕ್ಕೆಯನ್ನು ಕ್ರಿಕೆಟಿಗರ ಟ್ವೀಟ್ ಗಳಿಂದ ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ "ಇಂಡಿಯಾ ಟುಗೆದರ್", "ಇಂಡಿಯಾ ಅಗೇನ್ಸ್ಟ್ ಪ್ರಾಪಗೆಂಡಾ" ಎಂದು ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. "ವಿದೇಶಿ ಸೆಲೆಬ್ರಿಟಿಗಳಿಗೆ ದೇಶದ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುವಂತೆ ಭಾರತ ಸರ್ಕಾರ ಮಾಡುತ್ತಿರುವುದು ಮುಜುಗರದ ಸಂಗತಿ. ಇದು ಸರ್ಕಾರದ ಅಪ್ರಬುದ್ಧತೆಯನ್ನು ತೋರುತ್ತದೆ. ಇದರಿಂದಲೇ ಭಾರತದ ಪ್ರತಿಷ್ಠೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಹಾನಿಯನ್ನು ಕ್ರಿಕೆಟಿಗರ ಟ್ವೀಟ್ ಗಳಿಂದ ಸರಿ ಮಾಡಲು ಸಾಧ್ಯವಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಮೊದಲು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡು ರೈತರೊಂದಿಗೆ ಪರಿಹಾರಗಳ ಕುರಿತು ಚರ್ಚಿಸಿ. ಆಗ ಭಾರತ ಮತ್ತೆ ಒಗ್ಗಟ್ಟಾಗುತ್ತದೆ" ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಕೂಡ ಪ್ರತಿಕ್ರಿಯೆ ನೀಡಿದ್ದು, "ರಿಹಾನಾ, ಗ್ರೇಟಾ ಥನ್ ಬರ್ಗ್ ಅವರಿಂದಲಾದರೂ ಸರ್ಕಾರ ಎಚ್ಚೆತ್ತುಕೊಂಡಿದ್ದು ಒಳ್ಳೆಯ ವಿಷಯ. ಮಾನವೀಯತೆ, ಮಾನವ ಹಕ್ಕು ಹಾಗೂ ಜೀವನಾಧಾರಕ್ಕೆ ಸಂಬಂಧಪಟ್ಟ ವಿಷಯಗಳಿಗೆ ದೇಶ ವಿದೇಶ ಎಂಬ ಬೇಲಿ ಬೇಕಿಲ್ಲ" ಎಂದು ಹೇಳಿದ್ದಾರೆ.