ಡಾಟಿ ಮಹಾರಾಜ್ ವಿರುದ್ಧದ ರೇಪ್ ಕೇಸ್ ಸಿಬಿಐ ತನಿಖೆಗೆ
ನವದೆಹಲಿ, ಅಕ್ಟೋಬರ್ 03: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ದೆಹಲಿ ಪೊಲೀಸರನ್ನು ದೆಹಲಿ ಹೈಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸೂಚಿಸಿದೆ.
ಅಕ್ಟೋಬರ್ 01ರಂದು ಸಾಕೇತ್ ಕೋರ್ಟಿನಲ್ಲಿ ಬಾಬಾ ಡಾಟಿ ಮಹಾರಾಜ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ತಮ್ಮ ಆಶ್ರಮದಲ್ಲಿದ್ದ ಯುವತಿ ಮೇಲೆ ಡಾಟಿ ಮಹಾರಾಜ್ ಹಾಗೂ ಆತನ ಸಹಚರರು ಎರಡು ವರ್ಷಗಳ ಹಿಂದೆ ಅತ್ಯಾಚಾರ ಎಸಗಿದ ಆರೋಪವಿದೆ. ಫತೇಪುರ್ ಬೆರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಟಿ ಮಹಾರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 376, 377, 354 ಮತ್ತು 34ರ ಅಡಿಯಲ್ಲಿ ಕೇಸ್ ಹಾಕಲಾಗಿದೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರು
ದೆಹಲಿ ಹಾಗೂ ಎನ್ ಸಿಆರ್ ಭಾಗದಲ್ಲಿ ಜನಪ್ರಿಯತೆ ಗಳಿಸಿರುವ ಡಾಟಿ ಮಹಾರಾಜ್ ಅವರು ಗುರುವಾರ ಹಾಗೂ ಶನಿವಾರದಂದು ನಡೆಸುವ ಸತ್ಸಂಗ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಲವು ಟಿವಿ ಶೋಗಳು, ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ.