ಯಾಸ್ ಚಂಡಮಾರುತ: ಅಮಿತ್ ಶಾ ಸಭೆಗೆ ಹಾಜರಾಗದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ನವದೆಹಲಿ, ಮೇ 24: ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಕರೆದಿದ್ದ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಭಾಗಿಯಾಗಲು ನಿರಾಕರಿಸಿದ್ದಾರೆ. ಪೂರ್ವನಿಯೋಜಿತ ಕಾರ್ಯಕ್ರಮಗಳನ್ನು ಉಲ್ಲೇಖಿಸಿರುವ ಮಮತಾ ಬ್ಯಾನರ್ಜಿ ಬದಲಿಗೆ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಭಾಗಿಯಾದರು.
ಯಾಸ್ ಚಂಡಮಾರುತದ ಅಪಾಯದ ಹಿನ್ನೆಲೆಯಲ್ಲಿ ಚಂಡಮಾರುತವನ್ನು ಎದುರಿಸಲು ನಡೆಸಿರುವ ಸಿದ್ಧತೆಗಳ ಬಗ್ಗೆ ಪರಾಮರ್ಶಿಸಲು ಗೃಹಸಚಿವರು ಸಭೆ ಕರೆದಿದ್ದರು. ಯಾಸ್ ಚಂಡಮಾರುತದ ಭೀತಿ ಹೆಚ್ಚಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಯಾಸ್ ಚಂಡಮಾರುತ: ಮಹತ್ವದ ಸಭೆ ನಡೆಸಿದ ಗೃಹಸಚಿವ ಅಮಿತ್ ಶಾ
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಒಡಿಶಾ, ಆಂದ್ರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಅಂಡಮಾನ್ ಹಾಗೂ ನಿಕೋಬಾರ್ನ ಲೆಫ್ಟಿನೆಂಟ್ ಗವರ್ನರ್ ಭಾಗಿಯಾಗಿದ್ದರು. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಸಭೆಯಿಂದ ಹೊರಗುಳಿದಿದ್ದರು.
ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಯಾಸ್ ಚಂಡಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶಕ್ಕೆ ಮೇ 26ರಂದು ಅಪ್ಪಳಿಸುವ ಸಾಧ್ಯತೆಯಿದೆ.
ಎಲ್ಲಿಂದ ಎಲ್ಲಿ ತನಕ ಚಂಡಮಾರುತದ ಹಾವಳಿ ಪೂರ್ಣ ವರದಿ ಇಲ್ಲಿದೆ
ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಫೋರ್ಟ್ಬ್ಲೇರ್ನಿಂದ 600 ಕಿಮೀ ದೂರದಲ್ಲಿ ಭಾರೀ ಒತ್ತಡದೊಂದಿಗೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ. ಮುಂದಿನ 24 ಗಂಟೆಯಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ.