ತೌಕ್ತೆ ಚಂಡಮಾರುತದ ಭೀಕರತೆ ಅಂತ್ಯವಾಗಿದೆ ಎಂದ ಎನ್ಡಿಆರ್ಎಫ್ ಮುಖ್ಯಸ್ಥ
ನವದೆಹಲಿ, ಮೇ 18: ದೇಶದ ಪಶ್ಚಿಮ ಕರಾವಳಿ ತೀರಗಳಲ್ಲಿ ಅಬ್ಬರಿಸಿ ಆತಂಕವನ್ನು ಮೂಡಿಸಿದ್ದ ತೌಕ್ತೆ ಚಂಡಮಾರುತ ಹಲವು ಆಸ್ತಿಪಾಸ್ತಿಗಳಿಗೂ ನಷ್ಟವನ್ನುಂಟು ಮಾಡಿತ್ತು. ಇದೀಗ ಈ ಚಂಡಮಾರುತದ ಬಗ್ಗೆ ನಿರಾಳತೆಯ ಸುದ್ದಿಯೊಂದು ಬಂದಿದೆ. ಎನ್ಡಿಆರ್ಎಫ್ನ ನಿರ್ದೇಶಕ ಎಸ್ಎನ್ ಪ್ರಧಾನ್ ತೌಕ್ತೆ ಚಂಡಮಾರುತದ ಭೀಕರತೆ ಅಂತ್ಯವಾಗಿದೆ ಎಂದಿದ್ದಾರೆ.
"ಈ ಚಂಡಮಾರುತ ಈಗ ಹಿಂದಿನ ಮಟ್ಟಕ್ಕಿಂತ ದುರ್ಬಲವಾಗಿದೆ. ಮುಂದಿನ ಒಂದೆರಡು ಗಂಟೆಗಳಲ್ಲಿ ಇದು ಮತ್ತಷ್ಟು ದುರ್ಬಲವಾಗಲಿದೆ. ಗುಜರಾತ್ನ ಕರಾವಳಿಯನ್ನು ಸಂಜೆ ತಲುಪುವ ವೇಳೆಗೆ ಅದು ಬಹುತೇಕ ನಿಷ್ಕ್ರಿಯ ಹಂತಕ್ಕೆ ತಲುಪಲಿದೆ. ಅದರ ಭೀಕರತೆ ಅಂತ್ಯವಾಗಿದೆ" ಎಂದು ಎನ್ಎಸ್ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಗುಜರಾತ್ನಲ್ಲಿ ಈ ಚಂಡಮಾರುತದ ಪರಿಣಾಮದಿಂದಾಗಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. "ಸಂತಸದ ಸಂಗತಿಯೆಂದರೆ ಗುಜರಾತ್ನ ರಾಜ್ಯ ತುರ್ತು ಕಾರ್ಯಾಚರಣ ಕೇಂದ್ರ ನೀಡಿದ ಮಾಹಿತಿಯಂತೆ ಯಾರು ಕೂಡ ಈ ಚಂಡಮಾರುತಕ್ಕೆ ಸಾವನ್ನಪ್ಪಿಲ್ಲ ಎಂದು ಖಚಿತಪಡಿಸಿದೆ" ಎಂದಿದ್ದಾರೆ ಎನ್ ಎಸ್ ಪ್ರಧಾನ್.
"ಕೊರೊನಾ ವೈರಸ್ನ ಈ ಸಂದರ್ಭದಲ್ಲಿ ತುರ್ತುಪರಿಸ್ಥಿತಿಗಳನ್ನು ಎದುರಿಸಲು ರಸ್ತೆ ಹಾಗೂ ಸಂವಹನ ಮಾಧ್ಯಮಗಳನ್ನು ತೆರವುಗೊಳಿಸುವುದು ಬಹಳ ಮುಖ್ಯವಾಗಿತ್ತು. ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಎರಡು ಡೋಸ್ ಪಡೆದುಕೊಂಡಿರುವ ತಂಡಗಳ ಸದಸ್ಯರನ್ನು ರಕ್ಷಣೆಗಾಗಿ ನಾವು ಕಳುಹಿಸಿದ್ದೇವೆ" ಎಂದು ಎನ್ಡಿಆರ್ಎಫ್ನ ನಿರ್ದೇಶಕ ಎಸ್ಎನ್ ಪ್ರಧಾನ್ ವಿವರಿಸಿದ್ದಾರೆ.
ಗುಜರಾತ್ನಲ್ಲಿ ಭೂಭಾಗವನ್ನು ಅಪ್ಪಳಿಸಿದ ಈ ಚಂಡಮಾರುತ 190 ಕಿಮೀ ವೇಗವನ್ನು ಹೊಂದಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಗಿಡಮರಗಳು, ವಿದ್ಯುತ್ ಕಂಬಗಳು ಹಾಗೂ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ಎಫ್ ಪಡೆ ಮಹತ್ವದ ಪಾತ್ರವನ್ನು ವಹಿಸಿದೆ.