ಒಳಗೆ ನಡೆದಿರುವುದು ನಿಮಗೆ ಗೊತ್ತಿಲ್ಲ: ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು, ಆ. 24: ನಿರೀಕ್ಷೆಯಂತೆ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕತ್ವದ ಹೊಣೆಯನ್ನು ಹೊತ್ತುಕೊಳ್ಳಲು ಒಪ್ಪಿಲ್ಲ. ಹೀಗಾಗಿ ಮತ್ತೆ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆದರೆ ಇದು ಪೂರ್ವ ನಿರ್ಧಾರಿತ ನಡೆ ಎಂದೇ ರಾಜಕೀಯ ಬಲ್ಲವರು ವಿಶ್ಲೇಷಣೆ ಮಾಡುತ್ತಿದ್ದಾರೆ. ಸಧ್ಯದ ಕೊರೊನಾ ವೈರಸ್ ಸಂಕಷ್ಟದಲ್ಲಿ ನಾಯಕತ್ವ ಬದಲಾವಣೆ ಬದಲಿಗೆ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ನಾಟಕೀಯ ಬೆಳವಣಿಗೆ ಬಳಿಕವೂ ಬದಲಾಗದ ನಾಯಕತ್ವ: ಸೋನಿಯಾ ಪಾರುಪತ್ಯ ಮುಂದುವರಿಕೆ
ರಾಹುಲ್ ಗಾಂಧಿ ಅವರು ಮತ್ತೆ ನಾಯಕತ್ವ ವಹಿಸಿಕೊಳ್ಳಲು ಸಂದರ್ಭ ಸರಿಯಾಗಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರೆಯುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ರಾಹುಲ್ ಗಾಂಧಿ ಅವರಿಗೆ ಭರ್ಜರಿ ಪುನರಾಗಮನ ಕೊಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಪತ್ರವನ್ನೂ ಕಾಂಗ್ರೆಸ್ ಹಿರಿಯ ನಾಯಕರು ಬರೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಭೆಯ ಬಳಿಕ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ರಾಹುಲ್ ಮನವೊಲಿಕೆ
2021ರ ಫೆಬ್ರವರಿಯ ಒಳಗೆ ಹೊಸ ಅಧ್ಯಕ್ಷರ ನೇಮಕದ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ cwc ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ನಂತರ ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾರಥಿ ಯಾರಾಗಬೇಕು ಎಂಬುದನ್ನು ತೀರ್ಮಾನ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹೀಗಾಗಿ ಫೆಬ್ರವರಿಯೊಳಗೆ ನಾಯಕತ್ವ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ ಅವರ ಮನವೊಲಿಸಲು ನಿರ್ಧಾರ ಮಾಡಲಾಗಿದ್ದು, ಅವರು ಒಪ್ಪದೆ ಹೋದರೆ ಹೊಸ ಅಧ್ಯಕ್ಷರ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸ್ಥಿತಿ ಬಂದರೆ, ಆಂತರಿಕ ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆಮಾಡಲು ತೀರ್ಮಾನಿಸಲಾಗಿದೆ.
ಸೋನಿಯಾ ಗಾಂಧಿ
ಎಐಸಿಸಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರೇ ಮುಂದುವರಿಯಬೇಕೆಂದು ನಾನು ಬೆಂಬಲಿಸಿದ್ದೆ. ನಾವೀಗ ಕಾರಣಾಂತರಗಳಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು. ಇಲ್ಲವೇ ರಾಹುಲ್ ಮುಂದುವರಿಯಬೇಕು ಎಂದು ಅವರಿಗೆ ವೈಯುಕ್ತಿಕ ನಿಲುವು ತಿಳಿಸಿದ್ದೆ. ಜೊತೆಗೆ ಸೋನಿಯಾ ಗಾಂಧಿ ಅವರಿಗೂ ಮನವಿ ಮಾಡಿಕೊಂಡಿದ್ದೆವು ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ: ಕಾಂಗ್ರೆಸ್ ನಾಯಕರು ಕಂಗಾಲು!
ನನ್ನ ಹೆಸರು ಊಹಾಪೋಹ
ನಾವೆಲ್ಲರೂ ಸೋನಿಯಾ ಗಾಂಧಿ ಅವರನ್ನು ಬೆಂಬಲಿಸಿದ್ದೇವೆ. ಮಲ್ಲಿಕಾರ್ಜುನ್ ಖರ್ಗೆ ರೇಸ್ನಲ್ಲಿದ್ದಾರೆ ಅನ್ನೋದು ಊಹಾಪೋಹ
ಮಾತ್ರ ಎಂದು ಸ್ವತಃ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಊಹಾಪೋಹದ ಮಾತುಗಳನ್ನು ಸೃಷ್ಟಿಸಬೇಡಿ. ಸೋನಿಯಾ ಗಾಂಧಿ ಬಿಟ್ಟರೆ ರಾಹುಲ್ ಗಾಂಧಿ ಅವರೇ ಮುಂದುವರಿಯುತ್ತಾರೆ. ನಾನು ಇರೋದನ್ನೇ ಇಲ್ಲಿ ಹೇಳಿದ್ದೇನೆ. ಒಳಗೆ ನಡೆದಿರುವುದು ನಿಮಗೆ ಗೊತ್ತಿಲ್ಲ. ನನ್ನ ಹೆಸರು ಬರ್ತಿದೆ ಅನ್ನೋದು ಬೇರೆ ಮಾತು ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ತಪ್ಪು ಒಪ್ಪಿಕೊಂಡಿದ್ದಾರೆ
ನಾಯಕತ್ವ ಬದಲಾವಣೆಗೆ ಪತ್ರ ಬರೆದು ಆಗ್ರಹಿಸಿದ್ದವರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಈಗ ಅವರೆಲ್ಲರೂ ತಮ್ಮ ಅಭಿಪ್ರಾಯವನ್ನು ಮತ್ತೆ ತಿಳಿಸಿದ್ದಾರೆ. ಅದೀಗ ಮುಗಿದಿದೆ. ಅದನ್ನು ಬಿಟ್ಟು ಬೇಕಾದಷ್ಟು ವಿಚಾರಗಳಿವೆ. ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ. ಚೀನಾ ಸಂಘರ್ಷ, ನೋಟ್ ಬ್ಯಾನ್ ಇನ್ನಿತರೆ ವಿಚಾರ ದೇಶದ ಮುಂದಿವೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಸಭೆಯ ಬಳಿಕ ಹೇಳಿದ್ದಾರೆ.