ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಯೋಧರಿಂದ ರಕ್ತದಾನ
ನವದೆಹಲಿ, ಫೆಬ್ರವರಿ 27: ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ನೆರವಾಗಲೆಂದು ಸಿಆರ್ಪಿಎಫ್ ಯೋಧರು ಇಂದು ರಕ್ತದಾನ ಮಾಡಿದ್ದಾರೆ.
30 ಕ್ಕೂ ಹೆಚ್ಚು ಮಂದಿ ಸಿಆರ್ಪಿಎಫ್ ಯೋಧರು ಇಂದು ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ರಕ್ತದ ಕೊರತೆ ಆಗಬಾರದೆಂಬ ದೂರದೃಷ್ಟಿಯಿಂದ ರಕ್ತದಾನ ಮಾಡಲಾಗಿದೆ.
ಒಟ್ಟು 50 ಮಂದಿ ಸಿಆರ್ಪಿಎಫ್ ಯೋಧರು ರಕ್ತದಾನ ಮಾಡಲೆಂದು ಆಸ್ಪತ್ರೆಗೆ ಆಗಮಿಸಿದ್ದರು. ಅವರಲ್ಲಿ 34 ಮಂದಿಯಿಂದ ಮಾತ್ರವೇ ರಕ್ತ ಪಡೆಯಲಾಗಿದ್ದು, ಉಳಿದವರು ರಕ್ತದಾನ ಮಾಡಲು ತಯಾರಿರಿರೆಂದು ಸೂಚಿಸಿ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ದೆಹಲಿಯ ಜಿಟಿಡಿ ಆಸ್ಪತ್ರೆಯಲ್ಲಿ ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡು ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಚಿಕಿತ್ಸೆಗೆ ರಕ್ತದ ಅವಶ್ಯಕತೆ ಇದೆ. ಹಾಗಾಗಿ ಆಸ್ಪತ್ರೆಯಲ್ಲಿನ ರಕ್ತದ ಬ್ಯಾಂಕ್ ಕೊರತೆ ಆಗದಂತಿರಲೆಂದು ರಕ್ತದಾನ ಮಾಡಲಾಗಿದೆ.
ಭಾನುವಾರದಿಂದಲೂ ದೆಹಲಿಯಲ್ಲಿ ಹಿಂಸಾಚಾರ ಮಿತಿಮೀರಿದ್ದು ಈವರೆಗೆ 38 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.