ಒಬಾಮಾ ಆಗ್ರಾ ಭೇಟಿ ರದ್ದಾಗಿದ್ದು ಏಕೆ? ಇಲ್ಲಿದೆ ಕಾರಣ
ನವದೆಹಲಿ, ಜ. 24 : ಇದು ಅಧಿಕೃತ. ಗಣರಾಜ್ಯೋತ್ಸವದಂದು ಭಾರತದ ವಿಶೇಷ ಅತಿಥಿಯಾಗಿ ಬರಲಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರೇಮಿಗಳ ಸೌಧ 'ತಾಜ್ ಮಹಲ್' ವೀಕ್ಷಣೆಗೆ ಹೋಗುವುದಿಲ್ಲಿ. ಅದ ಮುಂದಿರುವ ಬೆಂಚಿನ ಮೇಲೆ ಧರ್ಮಪತ್ನಿ ಮಿಷೆಲ್ ಜೊತೆ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳುವುದಿಲ್ಲ.
ಇದರ ನಷ್ಟ ಯಾರಿಗಾಗಲಿದೆ? ಹೆಂಡತಿಯ ಜೊತೆ ಕುಳಿತು ಫೋಟೋ ತೆಗೆಸಿಕೊಳ್ಳುವ ಚಾನ್ಸ್ ಮಿಸ್ ಮಾಡಿಕೊಳ್ಳಲಿರುವ ಬರಾಕ್ ಒಬಾಮಾಗೋ ಅಥವಾ ಅವರ ಭದ್ರತೆಗೆಂದು ಸಾಕಷ್ಟು ಶ್ರಮ ಮತ್ತು ಹಣ ವ್ಯಯ ಮಾಡಿದ್ದ ಭಾರತಕ್ಕೊ? ಆದರೆ, ಭಾರತಕ್ಕೆ ಹೊರಡಲು ಇನ್ನು ಕೆಲವೇ ಗಂಟೆಗಳಿರುವಾಗ ಒಬಾಮಾ ಅವರ ಆಗ್ರಾ ಪ್ರವಾಸ ರದ್ದಾಗಿದೆ.
ತಾಜ್ ಪ್ರವಾಸದ ಕಾರ್ಯಕ್ರಮ ರದ್ದಾಗಿರುವುದನ್ನು ಆಗ್ರಾ ಜಿಲ್ಲಾಡಳಿತ ಖಚಿತಪಡಿಸಿದ್ದರೆ, ನಂಬಲರ್ಹ ಮೂಲಗಳ ಪ್ರಕಾರ, ಗುರುವಾರ ನಿಧನರಾದ ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಬಿನ್ ಅಬ್ದುಲ್ಲಜೀಜ್ ಅಲ್ ಸೌದ್ ನಿಧನದಿಂದ ಜರ್ಝರಿತವಾಗಿರುವ ಸೌದಿ ಅರೇಬಿಯಾಗೆ ಬರಾಕ್ ಒಬಾಮಾ ಪ್ರಯಾಣ ಬೆಳೆಸಲಿದ್ದಾರೆ.
ರದ್ದು ಮಾಡಲು ಕಾರಣಗಳಿರಲಿಲ್ಲ
ಅಸಲಿಗೆ, ತಾಜ್ ವೀಕ್ಷಣೆಯ ರದ್ದತಿಗೆ ಕಾರಣವೇ ಇರಲಿಲ್ಲ. ಏಕೆಂದರೆ, ಒಬಾಮಾ ಭದ್ರತೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಕೆಲ ದಿನ ಮೊದಲೇ ಅಮೆರಿಕದ ನೂರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಆಗ್ರಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಮತ್ತು ಥಂಬ್ಸ್ ಅಪ್ ಹೇಳಿದ್ದರು.
ಭಾರತವೂ ಸಾಕಷ್ಟು ಶ್ರಮ ವಹಿಸಿತ್ತು. ಸಾರ್ವಜನಿಕರ ವೀಕ್ಷಣೆ ರದ್ದುಪಡಿಸಲು ನಿರ್ಧರಿಸಿತ್ತು, ದೆಹಲಿ ಆಗ್ರಾ ನಡುವಿನ ಹೆದ್ದಾರಿಯನ್ನು ದುರಸ್ತಿಪಡಿಸಿತ್ತು, ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಿತ್ತು. ಆದರೆ, ಕಾರ್ಯಕ್ರಮ ರದ್ದುಪಡಿಸಲು ಕಾರಣವನ್ನು ಅಮೆರಿಕದ ಅಧಿಕಾರಿಗಳು ಅಧಿಕೃತವಾಗಿ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದ್ದಾರೆ. [ಸೌದಿಗೆ ಆಧುನಿಕ ಟಚ್ ನೀಡಿದ್ದ ದೊರೆ ಅಬ್ದುಲ್ಲಾ ಇನ್ನಿಲ್ಲ]
ಸೌದಿಗೆ ಹೆಚ್ಚು ಪ್ರಾಮುಖ್ಯತೆ
ಸೌದಿಗೆ ಭೇಟಿ ನೀಡಿ ಅಗಲಿದ ರಾಜನ ಕುಟುಂಬಸ್ಥರಿಗೆ ಸಾಂತ್ವನ ನೀಡುವುದಾಗಿ ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಹೇಳಿಕೆ ನೀಡಿದ್ದರು. ವ್ಯಾಪಾರದ ದೃಷ್ಟಿಯಿಂದ ಸೌದಿ ಅರೇಬಿಯಾ ಕೂಡ ಅಮೆರಿಕಕ್ಕೆ ಅತಿ ಮುಖ್ಯವಾದದ್ದರಿಂದ ಬರಾಕ್ ಒಬಾಮಾ ಕೂಡ ಸೌದಿಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು.
ಆರ್ಥಿಕ ವಹಿವಾಟಲ್ಲದೆ, ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಸೌದಿ ಅರೇಬಿಯಾ ಕೂಡ ಅಮೆರಿಕಕ್ಕೆ ಸಾಕಷ್ಟು ಬೆಂಬಲ ನೀಡುತ್ತಿದೆ. 2010ರಲ್ಲಿ ಅಮೆರಿಕದ ಮೇಲಾಗುವ ದಾಳಿಯನ್ನು ಎರಡು ಬಾರಿ ಸೌದಿ ಅರೇಬಿಯಾ ತಪ್ಪಿಸಿದ್ದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಸೌದಿಗೆ ಸಹಾಯಹಸ್ತ ಚಾಚಬೇಕಾಗಿದೆ. [ಆಗ್ರಾ ಭೇಟಿ ರದ್ದು ಸಾಧ್ಯತೆ]
ಭಾರತಕ್ಕೆ ಕೋಟಿ ಕೋಟಿ ನಷ್ಟ
ಒಬಾಮಾ ಅವರ ಆಗ್ರಾ ಭೇಟಿಗಾಗಿ ಭಾರತ ಕೋಟಿ ಕೋಟಿ ಹಣವನ್ನು ವ್ಯಯಿಸಿತ್ತು. ಅಧಿಕಾರಿಗಳು ಹಗಲಿರುಳು ಶ್ರಮಿಸಿ ಎಲ್ಲ ಸುಗಮವಾಗಿರುವಂತೆ ಎಚ್ಚಕೆ ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಬರಾಕ್ ಭೇಟಿಯಿಂದ ಹೊಸ ಹುಮ್ಮಸ್ಸು ಮೂಡಿತ್ತು. ಅಲ್ಲದೆ, ಇದರಿಂದಾಗಿ ಸ್ಥಳೀಯರಿಗೆ ಸಾಕಷ್ಟು ತೊಂದರೆಗಳೂ ಆಗಿತ್ತು. ಆಗ್ರಾ ಭೇಟಿ ರದ್ದತಿಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ.