ಲಸಿಕೆ ಬಗ್ಗೆ ನಿಮ್ಮ ಕಾಳಜಿ ಮೆಚ್ಚುತ್ತೇವೆ. ಆದರೆ...; ಚಿದಂಬರಂಗೆ ಕೇಂದ್ರ ಸಚಿವರ ಉತ್ತರ
ನವದೆಹಲಿ, ಜನವರಿ 21: ಕೊರೊನಾ ಲಸಿಕೆ ತೆಗೆದುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದು, ಲಸಿಕೆಗಳು ವ್ಯರ್ಥವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಒಮ್ಮೆ ಲಸಿಕೆ ತುಂಬಿರುವ ಬಾಕ್ಸ್ ತೆರೆದರೆ ಕನಿಷ್ಠ 4 ಗಂಟೆಯೊಳಗೆ ಖಾಲಿ ಮಾಡುವುದು ಕಡ್ಡಾಯವಾಗಿದ್ದು, ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕಾರಣ ವ್ಯರ್ಥವಾಗುತ್ತಿವೆ ಎನ್ನಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪ್ರತಿಕ್ರಿಯಿಸಿದ್ದು, ಲಸಿಕೆ ಪಡೆದುಕೊಂಡಿಲ್ಲ ಎಂಬ ಕಾರಣಕ್ಕೆ ತೆರೆದ ಹಾಗೂ ಅದರ ಜೊತೆಗೆ ಬಳಕೆ ಮಾಡದ ಲಸಿಕೆಗಳನ್ನೂ ವ್ಯರ್ಥ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು.
ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, "ಲಸಿಕೆ ತೆಗೆದುಕೊಳ್ಳಲು ಅಭ್ಯರ್ಥಿಯು ಗೈರು ಹಾಜರಾದರೆ ಬೇರೆ ಫಲಾನುಭವಿಗಳಿಗೆ ಅದನ್ನು ನೀಡುತ್ತೇವೆಯೇ ಹೊರತು ಲಸಿಕೆ ವ್ಯರ್ಥವಾಗಲು ಬಿಡುವುದಿಲ್ಲ" ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಕೆಲವು ತಪ್ಪು ಕಲ್ಪನೆಗಳು ಜನರಲ್ಲಿವೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಚಿದಂಬರಂ ಅವರ ಟ್ವೀಟ್ ಗೂ ಉತ್ತರ ನೀಡಿರುವ ಅವರು, "ಲಸಿಕೆಯೆಡೆಗೆ ನಿಮ್ಮ ಕಾಳಜಿಯನ್ನು ಮೆಚ್ಚುತ್ತೇವೆ. ಈ ಸಮಸ್ಯೆಯನ್ನು ಬಗೆಹರಿಸಲು ಸಚಿವಾಲಯ ಕ್ರಮಗಳನ್ನು ತೆಗೆದುಕೊಂಡಿದೆ. ಲಸಿಕೆ ತೆಗೆದುಕೊಳ್ಳಲು ಗೈರು ಹಾಜರಾದ ಪಕ್ಷದಲ್ಲಿ ಮತ್ತೊಬ್ಬ ಫಲಾನುಭವಿಗೆ ಲಸಿಕೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದರು.
ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಕುರಿತು ಎದ್ದಿರುವ ಪ್ರಶ್ನೆಗೂ ಉತ್ತರಿಸಿದ ಅವರು, "ಲಸಿಕೆ ಸುರಕ್ಷಿತ ಎಂದು ಸಾಬೀತಾದ ನಂತರವೇ ಅನುಮೋದನೆ ನೀಡಲಾಗಿದೆ. ಈ ಮೂಲ ಅಂಶವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.