ಸ್ವಯಂಸೇವಕನ ಆರೋಗ್ಯ ಕೆಡಲು ಲಸಿಕೆ ಕಾರಣವಲ್ಲ: ಸೆರಮ್
ನವದೆಹಲಿ, ಡಿಸೆಂಬರ್.01: ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಸಂಶೋಧಿಸಲ್ಪಟ್ಟಿರುವ ಕೋವಿಶೀಲ್ಡ್ ಲಸಿಕೆಯಿಂದ ತನ್ನ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂಬ ಸ್ವಯಂಸೇವಕನ ಆರೋಪಕ್ಕೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.
ಕೋವಿಶೀಲ್ಡ್ ಲಸಿಕೆಯು ಸುರಕ್ಷಿತ ಮತ್ತು ಹೆಚ್ಚು ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಪ್ರಯೋಗದಲ್ಲಿ ಭಾಗಿಯಾದ ಸ್ವಯಂಸೇವಕನ ಆರೋಗ್ಯ ಕೆಡುವುದಕ್ಕೆ ಲಸಿಕೆ ಕಾರಣವಲ್ಲ. ಸ್ವಯಂಸೇವಕನ ಆರೋಗ್ಯದ ಬಗ್ಗೆ ಸಹಾನುಭೂತಿ ಹೊಂದಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ. ಸೂಕ್ತ ಮಾರ್ಗಸೂಚಿಗಳ ಅಡಿಯಲ್ಲಿ ನೈತಿಕ ಕ್ರಮಗಳನ್ನು ಶ್ರದ್ಧೆಯಿಂದ ಕೈಗೊಳ್ಳುತ್ತೇವೆ ಎಂದು ಎಂದು ಸೆರಮ್ ಹೇಳಿದೆ.
ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ
ಕೋವಿಶೀಲ್ಡ್ ಲಸಿಕೆ ಸಂಶೋಧನೆ ಮತ್ತು ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಪ್ರಧಾನ ತನಿಖಾಧಿಕಾರಿ, ಡಿಎಸ್ಎಂಬಿ, ನೈತಿಕ ಸಮಿತಿಗೆ ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮೋದನೆ ನಂತರದಲ್ಲಿಯೇ ನಾವು ಲಸಿಕೆ ಸಂಶೋಧನೆಯ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಸುರಕ್ಷಿತವಾಗಿದ್ದಲ್ಲಿ ಮಾತ್ರ ಸಾರ್ವಜನಿಕ ಬಳಕೆ:
ಕೊರೊನಾವೈರಸ್ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಎನಿಸದ ಹೊರತೂ ಸಾರ್ವಜನಿಕರ ಬಳಕೆಗೆ ಲಸಿಕೆಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ತನ್ನ ಆರೋಗ್ಯ ಕೆಟ್ಟಿದೆ ಎಂದು ಸ್ವಯಂಸೇವಕನು ಮಾಡಿರುವ ಆರೋಪವು ದುರುದ್ದೇಶಪೂರತವಾಗಿದೆ. ಸುಖಾಸುಮ್ಮನೆ ಸಂಸ್ಥೆಯ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ನೀಡಿರುವ ದೂರಿನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂಪನಿಯು ತಿಳಿಸಿದೆ.
5 ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ ಸ್ವಯಂಸೇವಕ:
ಕಳೆದ ಅಕ್ಟೋಬರ್.01ರಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ವಯಂಸೇವಕರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿತ್ತು. ಹೀಗೆ ಲಸಿಕೆಯ ಮೊದಲ ಡೋಸ್ ಪಡೆದ ವ್ಯಕ್ತಿಯೊಬ್ಬರಿಗೆ ನರದೌರ್ಬಲ್ಯ ಮತ್ತು ಮಾನಸಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೋವಿಶೀಲ್ಡ್ ಲಸಿಕೆಯ ವೈದ್ಯಕೀಯ ಪ್ರಯೋಗದಿಂದ ತಮ್ಮ ಜೀವಕ್ಕೆ ಅಪಾಯವಾಗಿದ್ದು 5 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದರ ಜೊತೆಗೆ ಆ ಲಸಿಕೆಯ ಉತ್ಪಾದನೆ ಮತ್ತು ಸಂಶೋಧನೆ ನಿಲ್ಲಿಸಬೇಕು ಎಂದು ಚೆನ್ನೈ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದ್ದರು.