"ಕೊವಿಡ್-19 ಲಸಿಕೆ ತೆಗೆದುಕೊಂಡಿದ್ದಕ್ಕೆ 5 ಕೋಟಿ ಪರಿಹಾರ ಕೊಡಿ"
ನವದೆಹಲಿ, ನವೆಂಬರ್.29: ಕೊರೊನಾವೈರಸ್ ಸೋಂಕಿನ ಪ್ರಾಯೋಗಿಕ ಹಂತದಲ್ಲಿರುವ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಮತ್ತು ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಬೇಡಿಕೆ ಸಲ್ಲಿಸಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕ್ ಸಂಸ್ಥೆ ಸಹಯೋಗದೊಂದಿಗೆ ಪುಣೆ ಮೂಲದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ವೈದ್ಯಕೀಯ ಪ್ರಯೋಗ ನಡೆಸುತ್ತಿವೆ.
ಕೋವಿಶೀಲ್ಡ್ ಲಸಿಕೆಯ ವೈದ್ಯಕೀಯ ಪ್ರಯೋಗದಿಂದ ತಮ್ಮ ಜೀವಕ್ಕೆ ಅಪಾಯವಾಗಿದ್ದು 5 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದರ ಜೊತೆಗೆ ಆ ಲಸಿಕೆಯ ಉತ್ಪಾದನೆ ಮತ್ತು ಸಂಶೋಧನೆ ನಿಲ್ಲಿಸಬೇಕು ಎಂದು 40 ವರ್ಷದ ವ್ಯಕ್ತಿಯು ಮನವಿ ಸಲ್ಲಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ ಕೊವಿಡ್-19 ರೋಗಿಗಳ ಸೇವೆ ಮಾಡಬೇಕು!
ಕಳೆದ ಅಕ್ಟೋಬರ್.01ರಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ವಯಂಸೇವಕರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿತ್ತು. ಹೀಗೆ ಲಸಿಕೆಯ ಮೊದಲ ಡೋಸ್ ಪಡೆದ ವ್ಯಕ್ತಿಯೊಬ್ಬರಿಗೆ ನರದೌರ್ಬಲ್ಯ ಮತ್ತು ಮಾನಸಿಕ ಸಮಸ್ಯೆ ಕಾಣಿಸಿಕೊಂಡಿದೆ. ಲಸಿಕೆಯ ಮೊದಲ ಡೋಸ್ ಪಡೆದ ಸ್ವಯಂ ಸೇವಕರಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸಾಂಸ್ಥಿಕ ಸಿದ್ಧಾಂತ ಸಮಿತಿಯನ್ನು ರಚಿಸಿದೆ.
ಸಂಬಂಧಪಟ್ಟ ಸಂಸ್ಥೆ, ಅಧಿಕಾರಿಗಳಿಗೆ ನೋಟಿಸ್
ಕೊವಿಡ್-19 ಲಸಿಕೆ ಪಡೆದುಕೊಂಡು ಅಪಾಯಕ್ಕೆ ಸಿಲುಕಿದ ಸ್ವಯಂಸೇವಕನ ಮನವಿ ಮೇರೆಗೆ ನವೆಂಬರ್.21ರಂದು ಕಾನೂನು ಸಂಸ್ಥೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಗೆ ನೋಟಿಸ್ ನೀಡಲಾಗಿದೆ. ಇಂಗ್ಲೆಂಡಿನ ಅಸ್ಟ್ರಾಜೆನಿಕಾ ಸಂಸ್ಥೆಯ ಸಿಇಓ, ಪ್ರಾಧ್ಯಾಪಕ ಆಂಡ್ರೋ ಪೊಲಾರ್ಡ್, ಮುಖ್ಯ ತನಿಖಾಧಿಕಾರಿ, ಆಕ್ಸ್ ಫರ್ಡ್ ಲಸಿಕೆ ಪ್ರಯೋಗ ಮತ್ತು ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಉಪ ಕುಲಪತಿಯವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ನೋಟಿಸ್ ತಲುಪಿದ 2 ವಾರಗಳಲ್ಲಿ 5 ಕೋಟಿ ಪರಿಹಾರ
ಕೊವಿಡ್-19 ಲಸಿಕೆ ಪಡೆದು ಅನಾರೋಗ್ಯಕ್ಕೆ ತುತ್ತಾಗಿರುವ ವ್ಯಕ್ತಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಸುದೀರ್ಘ ಅವಧಿಯವರೆಗೂ ಅವರು ವೈದ್ಯಕೀಯ ಆರೈಕೆಗೆ ಒಳಗಾಗಬೇಕಿದೆ. ಈ ಹಂತದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಪರಿಹಾರವನ್ನು ನೀಡಬೇಕು. ನೋಟಿಸ್ ತಲುಪಿದ 2 ವಾರಗಳಲ್ಲೇ 5 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಕೋವಿಶೀಲ್ಡ್ ಬಳಕೆ ಬಗ್ಗೆ ಸೇರಮ್ ಹೇಳಿಕೆ ಬೆನ್ನಲ್ಲೇ ಘಟನೆ
ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ತುರ್ತ ಪರಿಸ್ಥಿತಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಬಳಸಿಕೊಳ್ಳಬಹುದು. ಈ ಬಗ್ಗೆ ಮುಂದಿನ 2 ವಾರಗಳಲ್ಲಿ ಕಾನೂನಾತ್ಮಕ ಅನುಮತಿ ಪಡೆದುಕೊಳ್ಳಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ಇದೇ ವಾರದಲ್ಲಿ ಲಸಿಕೆ ಕುರಿತು ಹೆಚ್ಚುವರಿಯಾಗಿ ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಪ್ರಯೋಗ ನಡೆಸುವುದಾಗಿ ಅಸ್ಟ್ರಾಜೆನಿಕಾ ಸಂಸ್ಥೆಯ ಸಿಇಓ ಹೇಳಿದ್ದರು.
ವೈದ್ಯಕೀಯ ಪ್ರಯೋಗವನ್ನು ತಡೆ ಹಿಡಿದ ಡಿಜಿಸಿಐ
ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ವೈದ್ಯ ಸಮಿರನ್ ಪಾಂಡಾ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪು ಎಲ್ಲಾಗಿದೆ ಎನ್ನುವುದರ ಕುರಿತು ತನಿಖೆ ಕೈಗೊಳ್ಳುವ ಅಗತ್ಯವಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾಂಸ್ಥಿಕ ತನಿಖಾ ಸಮಿತಿ ಮತ್ತು ಡಿಸಿಜಿಐ ತನಿಖಾ ತಂಡವು ಲಸಿಕೆಯ ಮಾದರಿ ಬಗ್ಗೆ ತನಿಖೆಯನ್ನು ನಡೆಸಲಿದೆ ಎಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿಯೇ ಡಿಜಿಸಿಐ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ರದ್ದುಗೊಳಿಸಿದೆ. ಸ್ವಯಂಸೇವಕನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆ ಆಸ್ಟ್ರಾಜೆನಿಕಾ ಕೂಡಾ ವೈದ್ಯಕೀಯ ಪ್ರಯೋಗಗಳನ್ನು ನಿಲ್ಲಿಸಿದೆ.