ಕೋವಿಡ್: ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಆಕ್ಸಿಜನ್ ಕೇಳಿದ್ದ ದೆಹಲಿ ಸರ್ಕಾರ- ಸುಪ್ರೀಂ ಕೋರ್ಟ್ ಸಮಿತಿ
ನವದೆಹಲಿ, ಜೂ. 25: ಕೋವಿಡ್ ಬಿಕ್ಕಟ್ಟಿನ ನಡುವೆ ದೆಹಲಿ ಸರ್ಕಾರವು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿತ್ತು ಎಂದು ಸುಪ್ರೀಂ ಕೋರ್ಟ್ ಸಮಿತಿ ವರದಿಯಲ್ಲಿ ತಿಳಿಸಿದೆ.
ಪ್ರತಿ ಬೆಡ್ಗೆ ಆಮ್ಲಜನಕ ಬಳಕೆ 289 ಮೆಟ್ರಿಕ್ ಟನ್ ಆಗಿದೆ. ಆದರೆ ದೆಹಲಿ ಸರ್ಕಾರವು ಇದರ ನಾಲ್ಕು ಪಟ್ಟು ಆಮ್ಲಜನಕವನ್ನು ಕೇಳಿತ್ತು. ಅಂದರೆ 1,140 ಮೆಟ್ರಿಕ್ ಟನ್ ಅಗತ್ಯವಿದೆ ಎಂದು ದೆಹಲಿ ಸರ್ಕಾರ ಹೇಳಿತ್ತು ಎಂದು ಸುಪ್ರೀಂಕೋರ್ಟ್ ನಿಯುಕ್ತ ಆಕ್ಸಿಜನ್ ಲೆಕ್ಕ ಪರಿಶೋಧನಾ ಸಮಿತಿ ಮಧ್ಯಂತರ ವರದಿಯಲ್ಲಿ ಹೇಳಿದೆ.
ಮೂರು ದಿನಗಳಲ್ಲಿ ರಾಜ್ಯಗಳಿಗೆ 96,490 ಡೋಸ್ ಕೊರೊನಾ ಲಸಿಕೆ ಪೂರೈಕೆ
ಸುಪ್ರೀಂ ಕೋರ್ಟ್ನ ಈ ಸಮಿತಿಯು ಏಮ್ಸ್ ನಿರ್ದೇಶಕ ರಣ್ದೀಪ್ ಗುಲೇರಿಯಾ ನೇತೃತ್ವದ್ದಾಗಿದ್ದು, ಈ ಸಮಿತಿಯಲ್ಲಿ ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮ್ಯಾಕ್ಸ್ ಹೆಲ್ತ್ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್ ಇದ್ದಾರೆ.
ಈ ಸಮಿತಿಯು ತನ್ನ ವರದಿಯಲ್ಲಿ, ''ದೆಹಲಿಯಲ್ಲಿ ಆಮ್ಲಜನಕದ ಸರಾಸರಿ ಬಳಕೆ 284 ರಿಂದ 372 ಮೆ.ಟನ್ ಆಗಿದೆ. ಆದರೆ ಸರ್ಕಾರ 1,140 ಮೆಟ್ರಿಕ್ ಟನ್ ಆಮ್ಲಜನಕ ಕೋರಿತ್ತು. ದೆಹಲಿಗೆ ಆಮ್ಲಜನಕದ ಹೆಚ್ಚುವರಿ ಪೂರೈಕೆಯು ಆಮ್ಲಜನಕದ ಅಗತ್ಯವಿರುವ ಇತರ ರಾಜ್ಯಗಳ ಮೇಲೆ ಪರಿಣಾಮ ಬೀರಿತ್ತು,'' ಎಂದು ಹೇಳಿದೆ.
ದೆಹಲಿ ಆಸ್ಪತ್ರೆಗಳು ನೀಡಿದ ದತ್ತಾಂಶದಲ್ಲಿನ ವ್ಯತ್ಯಾಸಗಳನ್ನು ಈ ಸಮಿತಿ ಉಲ್ಲೇಖಿಸಿದೆ. ''ಸಿಂಘಾಲ್ ಆಸ್ಪತ್ರೆ, ಅರುಣಾ ಆಸಿಫ್ ಅಲಿ ಆಸ್ಪತ್ರೆ, ಇಎಸ್ಐಸಿ ಮಾದರಿ ಆಸ್ಪತ್ರೆ ಮತ್ತು ಲಿಫೆರೆ ಆಸ್ಪತ್ರೆ ಕೆಲವು ಹಾಸಿಗೆಗಳನ್ನು ಹೊಂದಿದ್ದವು. ಅವುಗಳ ಡೇಟಾ ತಪ್ಪಾಗಿದೆ. ಇದು ದೆಹಲಿಯಲ್ಲಿ ಆಮ್ಲಜನಕದ ಅಗತ್ಯಕ್ಕಿಂತ ಹೆಚ್ಚು ಬಳಕೆಗೆ ಕಾರಣವಾಗಿದೆ,'' ಎಂದಿದೆ.
ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ
ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ ಏಪ್ರಿಲ್ 29 ರಿಂದ ಮೇ 10 ರವರೆಗೆ ಆಮ್ಲಜನಕದ ಬಳಕೆ 350 ಮೆ.ಟನ್ ಮೀರಲಿಲ್ಲ. ದೆಹಲಿ ಸರ್ಕಾರದ ಈ ಆಮ್ಲಜನಕ ಬೇಡಿಕೆ ಅಗತ್ಯಕ್ಕಿಂತ ಅಧಿಕ ಎಂದು ಕೇಂದ್ರ ಸರ್ಕಾರ ವಾದ ಮಾಡಿತ್ತು. ಆದರೆ ದೆಹಲಿಗೆ ಪ್ರತಿದಿನ 700 ಮೆ.ಟನ್ ಸರಬರಾಜು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ಕೋವಿಡ್ನ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಾದ್ಯಂತ ಆಮ್ಲಜನಕಕ್ಕಾಗಿ ಹಾಹಾಕಾರ ಮೂಡಿತ್ತು. ಕೆಲವು ರಾಜ್ಯಗಳು ಕೇಂದ್ರ ಸರ್ಕಾರ ಹೆಚ್ಚಿಗೆ ಆಮ್ಲಜನಕ ಪೂರೈಕೆ ಮಾಡಬೇಕು ಎಂದು ನ್ಯಾಯಾಲದ ಮೆಟ್ಟಿಲೇರಿತ್ತು.
(ಒನ್ಇಂಡಿಯಾ ಸುದ್ದಿ)