ಕೋವಿಡ್ 19: ಮುಂದಿನ 3 ತಿಂಗಳು ಎಚ್ಚರಿಕೆಯಿಂದಿರಿ, ನೀತಿ ಆಯೋಗ ಸಲಹೆ
ನವದೆಹಲಿ, ಜುಲೈ 23: ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇರುವ ಕಾರಣ ಮುಂದಿನ 3 ತಿಂಗಳು ಎಚ್ಚರಿಕೆಯಿಂದಿರುವಂತೆ ನೀತಿ ಆಯೋಗ ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಲಾಕ್ಡೌನ್ ಸಡಿಲಿಕೆ ಮಾಡಿರುವ ಕಾರಣ ಸೋಂಕು ಹೆಚ್ಚಳವಾಗುವ ಸಾಧ್ಯತೆ ಕೂಡ ಹೆಚ್ಚಿದೆ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಮಾತನಾಡಿದ್ದಾರೆ.
ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ದೇಶದಲ್ಲಿ ಕೊರೊನಾ ಮೂರನೇ ಅಲೆ; AIIMS
''ದೆಹಲಿಯು ದೇಶದ ರಾಜಧಾನಿಯಾಗಿರುವ ಕಾರಣ ಅಂತಾರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ವಿಧಿಸುವ ಮುನ್ನ ಕೇಂದ್ರ ಸರ್ಕಾರದ ಸಲಹೆ ಪಡೆಯಬೇಕು'' ಎಂದು ಸೂಚಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಮಾಣ ಪ್ರಸ್ತುತ ಕಡಿಮೆ ಇದೆ, ಆದರೆ ಮೈಮರೆಯುವಹಾಗಿಲ್ಲ, ಅನ್ಲಾಕ್ ಪ್ರಕ್ರಿಯೆ ಇರುವುದರಿಂದ ಯಾವಾಗ ಬೇಕಾದರೂ ಸೋಂಕು ಹೆಚ್ಚಳವಾಗಬಹುದು. ಹಾಗಾಗಿ ಮುಂದಿನ ಮೂರು ತಿಂಗಳ ಕಾಲ ಮಹತ್ವದ್ದಾಗಿದ್ದು, ನಾವು ಜಾಗರೂಕರಾಗಿರುವುದು ಅಗತ್ಯ ಎಂದಿದ್ದಾರೆ.
12 ರಾಜ್ಯಗಳಲ್ಲಿರುವ ಕೊರೊನಾ ವೈರಸ್ನ ರೂಪಾಂತರಿ ಡೆಲ್ಟಾ ಪ್ಲಸ್ ಬಗ್ಗೆ ದೆಹಲಿಯ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಮಾಹಿತಿ ನೀಡಿದ್ದಾರೆ. ಈಶಾನ್ಯ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಬರುವವರಿಗೆ ಈ ಹಿಂದೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದನ್ನು ಉಲ್ಲೇಖಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ. ಸಮ್ರಿಯಾನ್ ಪಾಂಡಾ ಅವರು ಮಾತನಾಡಿ, ''ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿರುವ ಸಾಧ್ಯತೆ ಇಲ್ಲ'' ಎಂದು ಹೇಳಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ದೆಹಲಿಯಲ್ಲಿ ಅಪಾರ ಪ್ರಮಾಣದಲ್ಲಿ ಜನರು ಮೃತಪಟ್ಟಿದ್ದರು, ಏಪ್ರಿಲ್ 20ರಂದು ಒಂದೇ ದಿನ ದೆಹಲಿಯಲ್ಲಿ 28,395 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು, ಮೇ 3ರಂದು ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ 448 ಮಂದಿ ಸಾವಿಗೀಡಾಗಿದ್ದಾರೆ.
ಸಭೆಯ ಅಧ್ಯಕ್ಷತೆವಹಿಸಿದ್ದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮಾತನಾಡಿ, ಆರ್ಟಿಪಿಸಿಆರ್ ನೆಗೆಟಿವ್ ವರದಿಯ ಬದಲು ಲಸಿಕೆ ಪ್ರಮಾಣಪತ್ರವನ್ನು ಮಾನದಂಡವಾಗಿಸಿಕೊಳ್ಳಬೇಕು, ಏಕೆಂದರೆ ಇದು ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.