2013ರ ಮಾನನಷ್ಟ ಕೇಸ್: ಕೇಜ್ರಿವಾಲ್, ಸಿಸೋಡಿಯಾ, ಯೋಗೇಂದ್ರಗೆ ನೆಮ್ಮದಿ
ನವದೆಹಲಿ, ಏಪ್ರಿಲ್ 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೋಡಿಯಾ, ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರ ವಿರುದ್ಧದ ಜಾಮೀನು ರಹಿತ ವಾರೆಂಟ್ ಗೆ ಬುಧವಾರದಂದು ದೆಹಲಿ ಹೈಕೋರ್ಟ್ ತಡೆ ನೀಡಿದೆ.
2013ರಲ್ಲಿ ಈ ಮೂವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಹಾಗೂ ಮೂವರ ವಿರುದ್ಧ ಜಾಮೀನು ರಹಿತ ವಾರೆಂಟ್(NBW) ಜಾರಿಯಾಗಿತ್ತು. NBW ರದ್ದುಪಡಿಸುವಂತೆ ಕೋರಿ, ಮೂವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಪುರಸ್ಕರಿಸಿದ್ದಾರೆ.
ವಕೀಲ ಸುರೇಂದ್ರ ಶರ್ಮ ಅವರು ಈ ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2013ರಲ್ಲಿ ಎಎಪಿ ಟಿಕೆಟ್ ವಂಚಿತರಾಗಿದ್ದ ಸುರೇಂದ್ರ ಅವರು ಭರವಸೆ ನೀಡಿ ಕೊನೆ ಕ್ಷಣದಲ್ಲಿ ವಂಚನೆ ಮಾಡಲಾಗಿದ್ದು, ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಅವಹೇಳನಕಾರಿ ರೀತಿಯಲ್ಲಿ ನನ್ನ ವಿರುದ್ಧ ಸುದ್ದಿ ಪ್ರಸಾರವಾಗಲು ಈ ಮೂವರು ಕಾರಣರಾಗಿದ್ದರು ಎಂದು ಅರ್ಜಿಯಲ್ಲಿ ಹೇಳಿದ್ದರು. ಸದ್ಯ ಈ ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ ಹಾಗೂ ಯಾದವ್ ಗೆ ಜಾಮೀನು ಮಂಜೂರಾಗಿದೆ.