ದೆಹಲಿ ಹೈಕೋರ್ಟ್ನಲ್ಲಿ ಚಿರಾಗ್ ಪಾಸ್ವಾನ್ಗೆ ಹಿನ್ನೆಡೆ: ಅರ್ಜಿ ವಜಾ
ನವದೆಹಲಿ, ಜು.10: ಪಶುಪತಿ ಕುಮಾರ್ ಪರಸ್ ಪಕ್ಷದ ನಾಯಕರನ್ನಾಗಿ ನೇಮಿಸುವ ಲೋಕಸಭಾ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಸಂಸದ ಚಿರಾಗ್ ಪಾಸ್ವಾನ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿ ರೇಖಾ ಪಲ್ಲಿ ನ್ಯಾಯಪೀಠವು ಚಿರಾಗ್ ಪಾಸ್ವಾನ್ ಅರ್ಜಿಯನ್ನು ವಜಾಗೊಳಿಸಿ, "ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ" ಎಂದು ಹೇಳಿದ್ದಾರೆ.
'ನಾನು ಮೋದಿಗೆ ಹನುಮಂತ' ಎಂದು ಚಿರಾಗ್ ಪಾಸ್ವಾನ್ ಹೇಳಿದ್ದೇಕೆ?
ಪಶುಪತಿ ಪಾರಸ್ರನ್ನು ಎಲ್ಜೆಪಿ ನಾಯಕ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾನ್ಯ ಮಾಡಿದ್ದನ್ನು ಪ್ರಶ್ನಿಸಿ ಚಿರಾಗ್ ಪಾಸ್ವಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಚಿರಾಗ್ ಪಾಸ್ವಾನ್ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸ್ಪೀಕರ್ ಓಂ ಬಿರ್ಲಾ ತೀರ್ಮಾನಕ್ಕೆ ತಡೆ ನೀಡಲು ನಿರಾಕರಿಸಿದೆ. ಹಾಗೆಯೇ ಈ ಸಮಸ್ಯೆಗೆ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಇದು ಶಾಸಕಾಂಗ ಪಕ್ಷವಾಗಿರುವುದರಿಂದ ಇದು ಪಕ್ಷದ ಆತಂರಿಕ ವಿವಾದ ಎಂದು ನ್ಯಾಯಾಲಯ ಹೇಳಿದೆ. ಹಾಗೆಯೇ ಅರ್ಜಿದಾರರು ಇತರ ಆಯ್ಕೆಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದೆ.
ಈ ಬಗ್ಗೆ ಮಾತನಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಈ ವಿವಾದವು ನ್ಯಾಯಾಂಗ ಪರಿಶೀಲನೆಯ ವಿಷಯವಾಗಲಾರದು. ಎಲ್ಜೆಪಿಯ ಚುನಾಯಿತ ಆರು ಜನ ಪ್ರತಿನಿಧಿಗಳಲ್ಲಿ ಐದು ಮಂದಿ ಅರ್ಜಿದಾರರಾದ ಚಿರಾಗ್ ಪಾಸ್ವಾನ್ ಜೊತೆ ಇಲ್ಲ. ಸ್ಪೀಕರ್ ವಿಚಾರಣೆಯ ಭಾಗವಾಗಿರಬಾರದು," ಎಂದು ಹೇಳಿದರು.
ಲೋಕಸಭಾ ಸ್ಪೀಕರ್ ಪರ ಹಾಜರಾದ ಹಿರಿಯ ವಕೀಲ ರಾಜಶೇಖರ್ ರಾವ್, "ಪಾರಸ್ ಸ್ಪೀಕರ್ ಗೆ ಬರೆದ ಪತ್ರದಲ್ಲಿ ಪಾರಸ್ ಎಲ್ಜೆಪಿ ಚುನಾಯಿತ ನಾಯಕ ಎಂದು ಹೇಳಿದ್ದಾರೆ. ಶಾಸಕಾಂಗ ಪಕ್ಷದ ಐವರು ಸದಸ್ಯರು ಸ್ಪೀಕರ್ ಮುಂದೆ ಪ್ರಾತಿನಿಧ್ಯ ನೀಡಿದ್ದಾರೆ," ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸಂಸದ ಪಶುಪತಿ ಪಾರಸ್ ಮಂತ್ರಿಸ್ಥಾನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ
ಚಿರಾಗ್ ಪಾಸ್ವಾನ್ ಪರ ಹಾಜರಾದ ವಕೀಲ ಅರವಿಂದ್ ಕುಮಾರ್ ಬಾಜ್ಪೈ, "ಎಲ್ಜೆಪಿ ಹೆಸರಿನಲ್ಲಿ ಚುನಾವಣೆಗಳನ್ನು ನಡೆಸಿದ್ದರಿಂದ ಸದಸ್ಯರು ರಾಜಕೀಯ ಪಕ್ಷಕ್ಕೆ ಸೇರಿದವರು. ಈ ಐದು ಸದಸ್ಯರನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಾರಾಸ್ರನ್ನು ಪಕ್ಷದಿಂದ ಹೊರಹಾಕಲಾಗಿದ್ದರೂ, ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವು ನಿಯಮಗಳು, ಅಭ್ಯಾಸ ಮತ್ತು ಕಾರ್ಯವಿಧಾನಗಳಿಗೆ ವಿರುದ್ಧವಾಗಿದೆ. ಪಕ್ಷದ ಸಂವಿಧಾನವನ್ನು ವಿರೋಧಿಸುತ್ತದೆ," ಎಂದು ವಾದಿಸಿದರು.
ಈ ಅರ್ಜಿಯನ್ನು ಸಮರ್ಥನೀಯವಲ್ಲ ಎಂದು ಗಮನಿಸಿದ ನ್ಯಾಯಾಲಯ, ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸುವ ಬದಲು ಚುನಾವಣಾ ಆಯೋಗಕ್ಕೆ ಹೋಗಬೇಕೆಂದು ಸೂಚಿಸಿದರು.
ಕಳೆದ ತಿಂಗಳು, ಎಲ್ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಕಿರಿಯ ಸಹೋದರ ಪಶುಪತಿ ಕುಮಾರ್ ಪಾರಾಸ್ ಮತ್ತು ಇತರ ನಾಲ್ವರು ಸಂಸದರು ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಪತ್ರವೊಂದನ್ನು ಹಸ್ತಾಂತರಿಸಿದರು. ಚಿರಾಗ್ ಪಾಸ್ವಾನ್ರನ್ನು ಪಕ್ಷದ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದೀಯ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಬೇಕು ಎಂದು ಮನವಿ ಮಾಡಿದರು.
ಬಳಿಕ ಬಿರ್ಲಾ ಪಾರಾಸ್ರನ್ನು ಕೆಳಮನೆಯ ಎಲ್ಜೆಪಿಯ ನಾಯಕರಾಗಿ ಸ್ವೀಕರಿಸಿದರು. ನಂತರ, ಚಿರಾಗ್ ಪಾಸ್ವಾನ್ ಬಿರ್ಲಾಗೆ ಪತ್ರ ಬರೆದಿದ್ದಾರೆ. ಪಾರಾಸ್ರನ್ನು ಎಲ್ಜೆಪಿಯ ನಾಯಕರಾಗಿ ಘೋಷಿಸುವ ನಿರ್ಧಾರವು ಪಕ್ಷದ ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಎಲ್ಜೆಪಿ ನಾಯಕರಾಗಿ ತಮ್ಮ ಪರವಾಗಿ ಹೊಸ ಸುತ್ತೋಲೆ ಹೊರಡಿಸುವಂತೆ ಲೋಕಸಭಾ ಸ್ಪೀಕರ್ಗೆ ಮನವಿ ಮಾಡಿದರು. ಪಕ್ಷದ ಹೊಸ ಅಧ್ಯಕ್ಷರಾಗಿ ಎಲ್ಜೆಪಿ ಬಂಡಾಯ ಬಣ ಪಾರಾಸ್ರನ್ನು ಆಯ್ಕೆ ಮಾಡಿದ ನಂತರ, ಪಕ್ಷದಿಂದ ಅಮಾನತುಗೊಂಡ ಎಲ್ಜೆಪಿ ಸದಸ್ಯರು ಈ ಚುನಾವಣೆ ನಡೆಸಿರುವುದು ಕಾನೂನುಬಾಹಿರ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)
Recommended Video