ದೆಹಲಿ ಗಲಭೆ: ಆಸೀಫ್, ಕಲಿತಾ, ನತಾಶಾ ಬಿಡುಗಡೆಗೆ ಕೋರ್ಟ್ ಆದೇಶ
ನವದೆಹಲಿ, ಜೂ. 17: ಜೂ. 17: ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಕಠಿಣ ನಿಬಂಧನೆಗಳ ಅಡಿಯಲ್ಲಿ ಬಂಧನದಲ್ಲಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಜಾಮಿಯಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾಗೆ ಜಾಮೀನು ಲಭಿಸಿದ ಎರಡು ದಿನಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ''ಹೈಕೋರ್ಟ್ ಜಾಮೀನು ನೀಡಿದ ನಂತರವೂ ಸರ್ಕಾರವು ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ,'' ಎಂದು ಆರೋಪಿಸಿ ಈ ಮೂವರು ತಕ್ಷಣ ಬಿಡುಗಡೆ ಮಾಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.
ದೆಹಲಿ ಗಲಭೆ: ದೇವಾಂಗನಾ, ನತಾಶಾ, ಆಸಿಫ್ಗೆ ಹೈಕೋರ್ಟ್ ಜಾಮೀನು ಮಂಜೂರು
ಗುರುವಾರ ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಕಡ್ಕಡ್ಡೂಮಾ ನ್ಯಾಯಾಲಯವು ಈ ಮೂವರ ಬಿಡುಗಡೆಗೆ ಆದೇಶಿಸಿದೆ. ಹಾಗೆಯೇ ''ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ಪ್ರತಿಗಳನ್ನು ಜೈಲು ಅಧಿಕಾರಿಗಳಿಗೆ ಇಮೇಲ್ ಮಾಡಲಾಗಿದೆ,'' ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರೆವಿಂದರ್ ಬೇಡಿ ತಿಳಿಸಿದರು.
ಈ ನಡುವೆ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ದೆಹಲಿ ಹೈಕೋರ್ಟ್ ಆದೇಶದಂತೆ ಜೈಲಿನಿಂದ ಶೀಘ್ರ ಬಿಡುಗಡೆಯಾಗಬೇಕೆಂದು ಮೂವರು ವಿದ್ಯಾರ್ಥಿಗಳು ಗುರುವಾರ ತುರ್ತು ಮೇಲ್ಮನವಿ ಆಲಿಸಲಾಗಿದೆ.
ದೆಹಲಿ ಹೈಕೋರ್ಟ್ ಮೂವರಿಗೂ ಜೂನ್ 15ರಂದು ಜಾಮೀನು ನೀಡಿದೆ. ಆದರೆ ಪೊಲೀಸರು ವಿಳಾಸ ಮತ್ತು ಶ್ಯೂರಿಟಿ ಪರಿಶೀಲನೆ ಹಿನ್ನೆಲೆ ಮೂವರನ್ನು ತಕ್ಷಣ ಬಿಡುಗಡೆ ಮಾಡಲು ಕಡಕಡ್ಡೂಮಾ ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು. ತನಿಖಾಧಿಕಾರಿ ಬುಧವಾರ ಹೆಚ್ಚಿನ ಸಮಯಾವಕಾಶ ಕೋರಿದ್ದರು. ಈ ಕಾರಣದಿಂದಾಗಿ ಬುಧವಾರವೂ ಈ ಮೂವರು ಬಿಡುಗಡೆಯಾಗಿರಲಿಲ್ಲ.
ಈ ಹಿನ್ನೆಲೆ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಕಡಕಡ್ಡೂಮಾ ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಕದ ತಟ್ಟಿದ್ದರು. ದೆಹಲಿ ಹೈಕೋರ್ಟ್, ''ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು. ಆ ಬಳಿಕ ಹೈಕೋರ್ಟ್ ಮಧ್ಯಾಹ್ನ 3.30 ಕ್ಕೆ ವಿಚಾರಣೆ ನಡೆಸಲಿದೆ,'' ಎಂದು ಗುರುವಾರ ಬೆಳಿಗ್ಗೆ ತಿಳಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತನ್ಹಾ, ಕಲಿತಾ, ನತಾಶಾ ಅವರನ್ನು ಬಿಡುಗಡೆಗೊಳಿಸಿ ಕಡ್ಕಡ್ಡೂಮಾ ನ್ಯಾಯಾಲಯ ಆದೇಶ ಹೊರಡಿಸಿದೆ.
(ಒನ್ಇಂಡಿಯಾ ಸುದ್ದಿ)