ದೆಹಲಿ ಹಿಂಸಾಚಾರ: ಉಮರ್ ಖಾಲಿದ್ಗೆ 10 ದಿನ ಪೊಲೀಸ್ ಬಂಧನ
ನವದೆಹಲಿ, ಸೆಪ್ಟೆಂಬರ್ 15: ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಸದಸ್ಯ ಉಮರ್ ಖಾಲಿದ್ ಅವರನ್ನು ದೆಹಲಿ ನ್ಯಾಯಾಲಯ 10 ದಿನಗಳ ಪೊಲೀಸ್ ಬಂಧನಕ್ಕೆ ಒಪ್ಪಿಸಲಾಗಿದೆ.
ಖಾಲಿದ್ ಅವರನ್ನು ದೆಹಲಿಯ ವಿಶೇಷ ಘಟಕದ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಭಾನುವಾರ ರಾತ್ರಿ ಬಂಧಿಸಿದ್ದರು. ಅವರನ್ನು ಸೋಮವಾರ ದೆಹಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ಕರ್ಡೂಮಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರನ್ನು ಹತ್ತು ದಿನಗಳವರೆಗ ತಮ್ಮ ವಶಕ್ಕೆ ನೀಡುವಂತೆ ದೆಹಲಿ ಪೊಲೀಸರ ಕೋರಿಕೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್ ಒಪ್ಪಿಕೊಂಡರು.
ದೆಹಲಿ ಗಲಭೆ: ಜೆಎನ್ಯು ಕಾರ್ಯಕರ್ತ ಉಮರ್ ಖಾಲೀದ್ ಬಂಧನ
ಉಮರ್ ಅವರಿಂದ ಅಪಾರ ಪ್ರಮಾಣದ ದಾಖಲೆ ಮತ್ತು ಮಾಹಿತಿಗಳನ್ನು ಪಡೆದುಕೊಳ್ಳಬೇಕಿದೆ. ಹೀಗಾಗಿ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಪೊಲೀಸರು ಕೇಳಿದ್ದರು.
ಫೆಬ್ರವರಿ 23ರಂದು ಹೊತ್ತಿಕೊಂಡ ಹಿಂಸಾಚಾರದ ಕಿಡಿಗೆ ಪೂರ್ವ ದೆಹಲಿಯಲ್ಲಿ 53 ಜನರು ಬಲಿಯಾಗಿದ್ದರು. ಖಾಲಿದ್ ಮತ್ತು ಇತರೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಅವರು ಪೂರ್ವನಿಯೋಜಿತ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ. ಸಿಎಎ/ಎನ್ಆರ್ಸಿ ವಿರೋಧಿ ಪ್ರತಿಭಟನೆಗಳು ನಡೆಯುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೂ ಮುನ್ನ ಜನರನ್ನು ಹಿಂಸೆಗೆ ಇಳಿಯುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ದೇಶದ್ರೋಹ, ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಧರ್ಮದ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವ ಪ್ರಕರಣಗಳನ್ನು ಕೂಡ ಉಮರ್ ಹಾಗೂ ಇತರೆ ಆರೋಪಿಗಳ ಮೇಲೆ ದಾಖಲು ಮಾಡಲಾಗಿದೆ.