ವಿಮಾನದಲ್ಲಿ ಆಹಾರವಿಲ್ಲ, ಔಷಧಿಯಿಲ್ಲ; ಹೈಕೋರ್ಟ್ ಮೆಟ್ಟಿಲೇರಿದ ದಂಪತಿ
ನವದೆಹಲಿ, ಏಪ್ರಿಲ್ 19: ವಿಮಾನದಲ್ಲಿ ಸರಿಯಾದ ಆಹಾರ ಹಾಗೂ ಔಷಧಿಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಹಿರಿಯ ದಂಪತಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಐದು ಲಕ್ಷ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ, ತಮ್ಮ 16 ಗಂಟೆಗಳ ದೀರ್ಘ ಅವಧಿಯ ಪ್ರಯಾಣದಲ್ಲಿ ಆಹಾರ ಹಾಗೂ ಔಷಧಿಗಳ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ದಂಪತಿ ಆರೋಪಿಸಿ, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಿಮಾನ ಟಿಕೆಟ್ ದರವನ್ನು ಹಿಂದಿರುಗಿಸಬೇಕು ಎಂದಿದ್ದಾರೆ. ಹಿರಿಯ ನಾಗರಿಕ ದಂಪತಿಯ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರತಿಭಾ ಎಂ ಸಿಂಗ್, "ಈ ರೀತಿಯ ಸಂಗತಿ ಭಯಾನಕ ಎನಿಸುತ್ತಿದೆ" ಎಂದಿದ್ದಾರೆ.
ಭಾರತ ಸೇರಿ 3 ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್ಕಾಂಗ್ ನಿರ್ಬಂಧ
ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನಯಾನ ಸಚಿವಾಲಯದ ನಿರ್ದೇಶನಾಯಲ, ಏರ್ ಇಂಡಿಯಾ, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಜಿಎಂಆರ್ ಏರೋಸಿಟಿಗೆ ನ್ಯಾಯಾಲಯ ನೋಟೀಸ್ ನೀಡಿದ್ದು, ಈ ಅರ್ಜಿ ಕುರಿತು ತಮ್ಮ ನಿಲುವೇನು ಎಂದು ಕೇಳಿದೆ.
ನವೆಂಬರ್ 11, 2020ರಲ್ಲಿ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊ ವಿಮಾನದಲ್ಲಿ ಈ ದಂಪತಿ ಪ್ರಯಾಣ ಮಾಡಿದ್ದರು. ಇಡೀ ಪ್ರಯಾಣದಲ್ಲಿ ಇಬ್ಬರಿಗೆ ಒಂದು ಊಟ ಕೊಟ್ಟಿದ್ದು, ಅದು ಕೂಡ ಸರಿಯಾಗಿರಲಿಲ್ಲ. ಒಬ್ಬರಿಗೆ ಮಧುಮೇಹವಿದೆ ಎಂದು ಮುನ್ನವೇ ಹೇಳಿದ್ದರೂ ಅವರು ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದ್ದಾರೆ. ಈ ಕುರಿತು ನಿವೇದಿತಾ ಹಾಗೂ ಅನಿಲ್ ಶರ್ಮಾ ದಂಪತಿ ಸುರುಚಿ ಮಿತ್ತಲ್ ಎಂಬ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.
ವಿಮಾನದಲ್ಲಿ ಆಹಾರ ಇಲ್ಲದೇ ಹೇಗೆ ಅಷ್ಟು ದೀರ್ಘ ಅವಧಿ ಪ್ರಯಾಣ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಜೀವಕ್ಕೇ ಅಪಾಯ ತರುವಂಥ ಕೆಲಸ ಎಂದು ದೂರಿದ್ದಾರೆ.
ದಂಪತಿ, ತಲಾ ಒಬ್ಬರಿಗೆ ತಮ್ಮ ಟಿಕೆಟ್ ಪ್ರಯಾಣ ದರ 2.25 ಲಕ್ಷ ರೂ ವಾಪಸ್ ನೀಡಬೇಕು ಹಾಗೂ ಎಲ್ಲಾ ವ್ಯವಸ್ಥೆ ಇದೆ ಎಂದು ಬಿಂಬಿಸಿ ಪ್ರಯಾಣಿಕರನ್ನು ಸುಳ್ಳೇ ನಂಬಿಸಿರುವುದರಿಂದ ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.