ಕೊರೊನಾ ವೈರಸ್: ಬ್ಯಾಂಕಾಕ್ ನಿಂದ ಬಂದ ಪ್ರಯಾಣಿಕನಿಗೆ ಸೋಂಕು
ನವದೆಹಲಿ, ಫೆಬ್ರವರಿ.13: ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೆ ಹೆಚ್ಚುಗುತ್ತಿರುವ ಸೂಚನೆ ಸಿಗುತ್ತಿದೆ. ನವದೆಹಲಿಯಲ್ಲಿ ವಿದೇಶದಿಂದ ಆಗಮಿಸಿದ ಪ್ರಯಾಣಿಕನಲ್ಲಿ ಮಾರಕ ಸೋಂಕು ಪತ್ತೆಯಾಗಿರುವ ಬಗ್ಗೆ ಅನುಮಾನ ವಕ್ತವಾಗಿದೆ.
ಬ್ಯಾಕಾಂಕ್ ನಿಂದ ದೆಹಲಿಗೆ ಆಗಮಿಸಿದ ಸ್ಪೈಸ್ ಜೆಟ್ 5G-88 ವಿಮಾನದ 31F ಸೀಟ್ ನಲ್ಲಿ ಕುಳಿತಿದ್ದ ವ್ಯಕ್ತಿಯು ಇಡೀ ಸಾಲಿನಲ್ಲಿ ಒಬ್ಬನೇಯಾಗಿದ್ದನು. ಅಕ್ಕಪಕ್ಕದ ಸೀಟ್ ನಲ್ಲಿ ಯಾರೊಬ್ಬ ಪ್ರಯಾಣಿಕರೂ ಇರಲಿಲ್ಲ. ಅಲ್ಲದೇ, ವ್ಯಕ್ತಿಯನ್ನು ಗಮನಿಸಿದಾಗ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದ್ದು, ಏರ್ ಪೋರ್ಟ್ ನಲ್ಲಿ ಆತನನ್ನು ತಡೆ ಹಿಡಿಯಲಾಗಿದೆ.
ಭಾರತಕ್ಕೆ ಕೊರಾನಾ ವೈರಸ್ ಹೊತ್ತು ತಂದ ಬ್ಯಾಂಕಾಕ್ ಬಳಗ
ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರೋಗ್ಯ ವಿಭಾಗದಲ್ಲಿ ಶಂಕಿತನನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇದುವರೆಗೂ ಭಾರತ ವಿಮಾನ ನಿಲ್ದಾಣಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಇನ್ನೊಂದೆಡೆ ಕೋಲ್ಕತ್ತಾದ ನೇತಾಜಿ ಸುಭಾಶ್ ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್ ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಗೆ ಕೊರೊನಾ ವೈರಸ್ ತಗಲಿರುವ ಬಗ್ಗೆ ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ಬ್ಯಾಂಕಾಕ್ ನಿಂದ ಕೋಲ್ಕತ್ತಾಗೆ ಆಗಮಿಸಿದ ಹಿಮಾದ್ರಿ ಬರ್ಮನ್ ಗೆ ಕೊರೊನಾ ವೈರಸ್ ಇರುವ ಬಗ್ಗೆ ಮಂಗಳವಾರ ತಿಳಿದಿದೆ. ಇನ್ನೊಬ್ಬ ಪ್ರಯಾಣಿಕ ನಾಗೇಂದ್ರ ಸಿಂಗ್ ರನ್ನು ಬುಧವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ಸೋಂಕು ತಗಲಿರುವ ಬಗ್ಗೆ ದೃಢಪಟ್ಟಿದೆ ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದ ನಿರ್ದೇಶಕ ಕೌಶಿಕ್ ಭಟ್ಟಾಚಾರ್ಯ ಸ್ಪಷ್ಟಪಡಿಸಿದ್ದಾರೆ.