ಮನುಕುಲದ ಇತಿಹಾಸದಲ್ಲಿ ಕೊರೊನಾ ಅತ್ಯಂತ ಕೆಟ್ಟ ಸನ್ನಿವೇಶ ಸೃಷ್ಟಿಸಿದೆ: ಜೋಶಿ
ನವದೆಹಲಿ, ಮೇ 31 : ''ಕೋವಿಡ್ 19 ದೇಶಕ್ಕೆ ಅತ್ಯಂತ ಕೆಟ್ಟ ಪರಿಸ್ಥಿತಿ ತಂದೊಡ್ಡಿದೆ. ಇತಹ ಕಠಿಣ ಸವಾಲನ್ನು ಭಾರತ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ'' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ''ಮನುಕುಲದ ಇತಿಹಾಸದಲ್ಲಿ ಕೊರೊನಾವೈರಸ್ ಅತ್ಯಂತ ಕೆಟ್ಟ ಸನ್ನಿವೇಶವಾಗಿದೆ. ಇದು ಕಂಡೂ ಕೇಳರಿಯದ ದುರಂತ. ಇಂತಹ ಕಠಿಣ ಸವಾಲನ್ನು ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಫಲರಾಗಿದ್ದಾರೆ'' ಎಂದು ಹೇಳಿದರು.
'ವೀರ ಸಾವರ್ಕರ್ ಬಗ್ಗೆ ಮೊದಲು ಅರಿತು ತಿಳಿದು ನಂತರ ಮಾತನಾಡಿ'
''ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಾ ಬಂದಿದೆ. ಅಭಿವೃದ್ಧಿಯ ಪಥದತ್ತ ದೇಶವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರೆದೊಯ್ಯುತ್ತಿದೆ. ಕೋವಿಡ್ನಿಂದ ಸಂಭವಿಸಿರುವ ಬಿಕ್ಕಟ್ಟನ್ನು ಎದುರಿಸುವಲ್ಲಿ ಕೇಂದ್ರ ಸರ್ಕಾರ ಸಮರ್ಥವಾಗಿದೆ'' ಎಂದು ಜೋಶಿ ಹೇಳಿದರು.
''ಕಳೆದ 70 ವರ್ಷದಲ್ಲಿ ದೇಶದಲ್ಲಿ ಆಗಿದ್ದ ಗಂಭೀರ ಸಮಸ್ಯೆಗಳನ್ನು ಮೋದಿ ಸರ್ಕಾರ ಕಳೆದ 6 ವರ್ಷಗಳ ಅವಧಿಯಲ್ಲಿ ಸರಿಪಡಿಸಿದೆ. ಭಯೋತ್ಪಾದನೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ತಹಬದಿಗೆ ತಂದಿದ್ದೇವೆ. ಈಗ ಕೋವಿಡ್ನಿಂದ ಉಂಟಾಗಿರುವ ಬಿಕ್ಕಟ್ಟನ್ನೂ ನಿಭಾಯಿಸುತ್ತೇವೆ'' ಎಂದು ಜೋಶಿ ಹೇಳಿದರು.