ದೆಹಲಿಯಲ್ಲಿ ಕೊರೊನಾ ಸೋಂಕು ಹೆಚ್ಚಳ: ಸ್ಮಶಾನಕ್ಕೆ ಹೊಸ ಜಾಗ ಹುಡುಕಿ ಎಂದ ಡಿಡಿಎಂಎ
ದೆಹಲಿ, ಜೂನ್ 2: ಕೊರೊನಾವೈರಸ್ ಸೋಂಕು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಸಾವಿನ ಸಂಖ್ಯೆಯು ಹೆಚ್ಚಾಗುತ್ತಾ ಎಂಬ ಅನುಮಾನ ಮೂಡಿಸಿದೆ. ಇದಕ್ಕೆ ಸಾಕ್ಷಿಯೆಂಬಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೆಹಲಿಯ ಜಿಲ್ಲಾಡಳಿತಗಳಿಗೆ ಬರೆದಿರುವ ಪತ್ರ ಇಂಥದೊಂದು ಅನುಮಾನಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಮಂಗಳವಾರ ಒಂದೇ ದಿನ 990 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 20,834 ಪ್ರಕರಣಗಳು ದಾಖಲಾಗಿವೆ ಮತ್ತು 12 ರೋಗಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 523 ಕ್ಕೆ ತಲುಪಿದೆ. ಜೊತೆಗೆ ಅತಿ ಹೆಚ್ಚು ಕೊರೊನಾ ಸೋಂಕಿತರ ರಾಜ್ಯಗಳ ಲಿಸ್ಟ್ನಲ್ಲಿ ನಾಲ್ಕರಲ್ಲಿದ್ದ ದೆಹಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಶವಸಂಸ್ಕಾರಕ್ಕೆ ಜಾಗಗಳನ್ನು ಗುರುತಿಸಿ ಎಂದು ಜಿಲ್ಲಾಡಳಿತಕ್ಕೆ ಪತ್ರ
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೊರೊನಾವೈರಸ್ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಮಾಡಿ ಇಟ್ಟುಕೊಂಡಿರಿ. ಜೊತೆಗೆ ಕೊರೊನಾವೈರಸ್ ತಗುಲಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಕೊರೊನಾಕ್ಕೆ ಬಲಿಯಾದವರ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸಿ ಎಂದು ಜಿಲ್ಲಾಡಳಿಗಳಿಗೆ ಪತ್ರ ಬರೆದಿದೆ.
ಲೆಫ್ಟಿನೆಂಟ್ ಗೌರ್ನರ್ ಕಚೇರಿಯ 13 ಸಿಬ್ಬಂದಿಗೆ ಕೋವಿಡ್ ಸೋಂಕು
ದೆಹಲಿಯಲ್ಲಿ 20,000 ಗಡಿದಾಟಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಅತಿಹೆಚ್ಚು ಕೊರೊನಾವೈರಸ್ ಪ್ರಕರಣಗಳು ಇರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡಿನ ಬಳಿಕ ದೆಹಲಿ ಮೂರನೇ ಸ್ಥಾನದಲ್ಲಿದೆ. ಇಂದು (ಜೂನ್ 2) ಒಂದೇ ದಿನ 990 ಪ್ರಕರಣಗಳು ದಾಖಲಾಗಿದ್ದು, ಒಟ್ಟು 20 ಸಾವಿರ ಗಡಿ ದಾಟಿದೆ. ರಾಷ್ಟ್ರ ರಾಜಧಾನಿಯು ಅತಿ ಚಿಕ್ಕ ರಾಜ್ಯವಾಗಿದ್ದರೂ, ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕಿಂತ ದೊಡ್ಡದಾಗಿದೆ.
ಈ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುವಂತೆ ಹಾಗೂ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸುವ ಕೆಲಸವನ್ನು ಮಾಡಿ ಎಂದು ಪತ್ರದಲ್ಲಿ ತಿಳಿಸಿದೆ.
ಸೋಂಕಿತರನ್ನು ಕ್ವಾರಂಟೈನ್ ಮಾಡಲು ಹೊಸ ಜಾಗಕ್ಕೆ ಹುಡುಕಾಟ
ಇದಲ್ಲದೆ ಕೊರೊನಾವೈರಸ್ ಸಂಖ್ಯೆ ಇನ್ನೂ ಹೆಚ್ಚಾಗುವುದರಿಂದ ವೈರಸ್ ಪೀಡಿರನ್ನು ಕ್ವಾರಂಟೈನ್ ಮಾಡಲು ಹಾಗೂ ಚಿಕಿತ್ಸೆ ನೀಡಲು ಸಮುದಾಯ ಭವನ, ಸಮುಚ್ಛಯಗಳು, ಕ್ರೀಡಾಂಗಣಗಳು ಮತ್ತು ಬ್ಯಾಂಕ್ವೆಟ್ ಹಾಲ್ ಗಳನ್ನು ಹುಡುಕಿ ಅವುಗಳನ್ನು ಕೋವಿಡ್-19 ಕೇಂದ್ರವನ್ನಾಗಿ ಪರಿವರ್ತಿಸಿ. ಜೊತೆಗೆ ಕೋವಿಡ್-19 ವೈರಸ್ ತಗುಲಿ ಮೃತಪಟ್ಟವರನ್ನು ಶವಸಂಸ್ಕಾರ ಮಾಡಲು ಜನವಾಸ ಮಾಡದೇ ಇರುವ ದೂರದ ಜಾಗಗಳನ್ನು ಕೂಡ ಪತ್ತೆ ಮಾಡಿ ಎಂದು ಹೇಳಿದೆ.
ಕೇಂದ್ರ ತನಿಖಾ ತಂಡದ ಅಧಿಕಾರಿಗಳನ್ನೂ ಬಿಟ್ಟಿಲ್ಲ ಕೊವಿಡ್-19
ಪರಿಸ್ಥಿತಿ ಕೈ ಮೀರುವ ಹಂತ ತಲುಪುವ ಎಚ್ಚರಿಕೆ
ದೆಹಲಿಯಲ್ಲಿ ತೀವ್ರ ವೇಗವಾಗಿ ಏರುತ್ತಿರುವ ಕೊರೊನಾಸೋಂಕಿತರ ಸಂಖ್ಯೆಯು ಪರಿಸ್ಥಿತಿ ಕೈ ಮೀರುವ ಹಂತ ತಲುಪಬಹುದು ಎಂಬ ಎಚ್ಚರಿಕೆಯನ್ನು ಹಿರಿಯ ವೈದ್ಯರು ನೀಡಿದ್ದಾರೆ.
ಕೊರೊನಾವೈರಸ್ ಮಹಾಮಾರಿ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯನ್ನು ಸಂಪೂರ್ಣ ಆವರಿಸಿಕೊಂಡಿದ್ದು, ಜೂನ್ ಮತ್ತು ಜುಲೈ ತಿಂಗಳಲ್ಲಿ ತಾರಕ್ಕೇರಲಿದೆ ಎಂದು ತಿಂಗಳ ಹಿಂದೆಯೇ ದೆಹಲಿ ಸರ್ಕಾರ ರಚಿಸಿದ್ದ ಕೋವಿಡ್-19 ವೈರಸ್ ರೆಸ್ಪಾನ್ಸ್ ಕಮಿಟಿಯ ಮುಖ್ಯಸ್ಥರಾದ ಡಾ. ಎಸ್.ಕೆ. ಸರೈನ್ ಅಭಿಪ್ರಾಯಪಟ್ಟಿದ್ದರು. ಅಂತೆಯೇ ಇದೀಗ ಅವರ ಭವಿಷ್ಯ ಈಗ ನಿಜವಾಗುವಂತೆ ಕಾಣುತ್ತಿದೆ.
ಜೊತೆಗೆ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅವರಿಗೆ ಚಿಕಿತ್ಸೆ ನೀಡುವುದೇ ದೆಹಲಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.