ಕೊರೊನಾ ಸಂಪೂರ್ಣ ನಿರ್ನಾಮ ಆಗುವವರೆಗೂ ವಿಮಾನ ಪ್ರಯಾಣ ಇಲ್ಲ
ನವದೆಹಲಿ, ಏಪ್ರಿಲ್ 8: ದೇಶದಲ್ಲಿಯೂ ಕೊರೊನಾ ಮಾಹಾಮಾರಿ ಹಾವಳಿ ಜೋರಾಗಿದೆ. ಇದರಿಂದ ದೇಶಿ ಅಂತಾರಾಷ್ಟ್ರೀಯ ವಿಮಾನಯಾನ ಸೇರಿದಂತೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ.
ಕೊರೊನಾ ಹಾವಳಿ ಕಡಿಮೆಯಾದರೆ ಹಂತ ಹಂತವಾಗಿ ಲಾಕ್ಡೌನ್ನ್ನು ತೆರವುಗೊಳಿಸುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಲಾಕ್ಡೌನ್ ತೆರವಾದರೂ ವಿಮಾನ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡುತ್ತಾ ಎನ್ನುವ ಕುತೂಹಲಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರೇ ಉತ್ತರ ನೀಡಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ಸಂಪೂರ್ಣ ನಾಶವಾದಾಗಲೇ ಮತ್ತೆ ವಿಮಾನಗಳ ಹಾರಾಟ ಪುನಾರಂಭಗೊಳ್ಳುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಕೊರೋನಾ ಸೋಂಕು ಸಂಪೂರ್ಣ ನಶಿಸಿದಾಗ ಮಾತ್ರ
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಅವರು, ಕೊರೋನಾ ವೈರಸ್ ಸೋಂಕಿನಿಂದಾಗಿಯೇ ದೇಶದಲ್ಲಿ ಎಲ್ಲ ರೀತಿಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ್ದು. ಹೀಗಾಗಿ ಮತ್ತೆ ದೇಶದಲ್ಲಿ ವಿಮಾನಗಳ ಹಾರಾಟ ಪುನಾರಂಭಗೊಳ್ಳುವುದು ಕೊರೋನಾ ಸೋಂಕು ಸಂಪೂರ್ಣ ನಶಿಸಿದಾಗ ಮಾತ್ರ ಎಂದು ಹೇಳಿದ್ದಾರೆ.
ದೇಶದ ಜನತೆಯ ಬಳಿ ಕ್ಷಮೆ ಕೋರುತ್ತೇವೆ
ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಅವರು, ಇಂತಹ ಸಂಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಸರ್ಕಾರದೊಂದಿಗೆ ಸಹಕರಿಸುತ್ತಿದ್ದೀರಿ. ನಾವೆಲ್ಲರೂ ಒಗ್ಗೂಡಿ ಈ ಮಹಾಮಾರಿಯನ್ನು ಸೋಲಿಸೋಣ. ಅಂತೆಯೇ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ನಾನು ದೇಶದ ಜನತೆಯ ಬಳಿ ಕ್ಷಮೆ ಕೋರುತ್ತೇವೆ. ಆದರೆ, ದೇಶದ ಜನರ ಜೀವ ರಕ್ಷಣೆಗಾಗಿ ಈ ನಿಯಮ ಅನಿವಾರ್ಯವಾದದ್ದು ಎಂದು ಹೇಳಿದ್ದಾರೆ.
ಟಿಕೆಟ್ ಕಾಯ್ದಿರಿಸುವಿಕೆಯನ್ನು ನಿಲ್ಲಿಸುವು ನಿರ್ಧಾರ
ಏಪ್ರಿಲ್ 14 ರವರೆಗೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಏರ್ ಇಂಡಿಯಾ, ಏಪ್ರಿಲ್ 30 ರವರೆಗೆ ತನ್ನ ಎಲ್ಲಾ ವಿಮಾನಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ನಿಲ್ಲಿಸುವು ನಿರ್ಧಾರ ತೆಗೆದುಕೊಂಡಿದೆ. "ಏರ್ ಇಂಡಿಯಾ ಬುಕಿಂಗ್ ಅನ್ನು ಈಗ ಏಪ್ರಿಲ್ 30 ರವರೆಗೆ ಮುಚ್ಚಲಾಗಿದೆ. ಏಪ್ರಿಲ್ 14 ರ ನಂತರ ಲಾಕ್ಡೌನ್ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಯಾಣಕರ ಸಂಖ್ಯೆ ಅತ್ಯಂತ ಕಡಿಮೆ ಇರಲಿದೆ
ಒಂದು ವೇಳೆ ಏ 14 ರ ನಂತರ ಲಾಕ್ಡೌನ್ನಲ್ಲಿ ವಿಮಾನಯಾನಕ್ಕೆ ಅವಕಾಶ ಸಿಕ್ಕರೂ ಆಗ ಪ್ರಯಾಣಕರ ಸಂಖ್ಯೆ ಅತ್ಯಂತ ಕಡಿಮೆ ಇರಲಿದೆ ಎಂದು ಅಂದಾಜಿಸಬಹುದು. ಹೀಗಾಗಿ ಮುಂಗಡ ಟಿಕೆಟ್ ಕಾಯ್ದಿರುಸುವುದನ್ನು ಏಪ್ರಿಲ್ 30 ರವೆರೆಗೆ ತಡೆಹಿಡಿಯುವುದೇ ಸೂಕ್ತ ಎಂಬ ನಿರ್ದಾರ ತೆಗೆದುಕೊಂಡಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್ ಇಂಡಿಯಾ ಸೇರಿದಂತೆ ಇನ್ನುಳಿದ ದೇಶಿ ವಿಮಾನಯಾನ ಸಂಸ್ಥೆಗಳು ಇದೇ ಹಾದಿ ತುಳಿಯಬಹುದು ಎನ್ನಲಾಗಿದೆ.