ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ಹೇಳುವುದೇನು?
ನವದೆಹಲಿ, ಮಾರ್ಚ್.05: ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಗೆ ಭಾರತೀಯರು ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಮತ್ತು ವೈದ್ಯಕೀಯ ರಂಗದ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಪತ್ತೆಯಾದ ಐವರು ಕೊರೊನಾ ವೈರಸ್ ಸೋಂಕಿತರ ಪೈಕಿ ನಾಲ್ವರು ಸೋಂಕಿತರು ತಮ್ಮ ಆತ್ಮಬಲದಿಂದಲೇ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡುಕೊಂಡಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?
ಭಾರತದಲ್ಲಿ ಇದುವರೆಗೂ 30 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಇಟಲಿಯಿಂದ ಆಗಮಿಸಿದ 16 ಪ್ರವಾಸಿಗರು ಕೂಡಾ ಸೇರಿದ್ದಾರೆ. ಇನ್ನು, ಕೇರಳದಲ್ಲಿ ಮೊದಲೇ ಸೋಂಕು ಕಾಣಿಸಿಕೊಂಡಿದ್ದ ಮೂವರು ಕೊರೊನಾ ವೈರಸ್ ನಿಂದ ಪಾರಾಗಿದ್ದಾರೆ.
ಮನೋಬಲಕ್ಕಿಂತ ಮದ್ದಿಲ್ಲ ಎಂದ ವಿಜ್ಞಾನಿಗಳು
ಕೊರೊನಾ ವೈರಸ್ ನಿಂದ ಗುಣಮುಖರಾಗಲು ಕಟ್ಟುನಿಟ್ಟಿನ ಚಿಕಿತ್ಸೆ ಕಡ್ಡಾಯ. ಇದರ ಜೊತೆಗೆ ಜನರಲ್ಲಿನ ಮನೋಬಲ ಮತ್ತು ರೋಗ ಹರಡುವ ಮೊದಲೇ ವಹಿಸುವ ಮುನ್ನೆಚ್ಚರಿಕೆ ಕ್ರಮಗಳು ಮಾರಕ ರೋಗದಿಂದ ಜನರನ್ನು ರಕ್ಷಿಸುತ್ತದೆ. ಆತ್ಮಬಲದ ಜೊತೆಗೆ ಜ್ವರ ಮತ್ತು ಕೆಮ್ಮಿಗೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್ ಮಾತ್ರೆಯೊಂದು ಇದ್ದರೆ ಸಾಕು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ಸೋಂಕಿತರೇ ಆತಂಕ ಪಡುವುದೇಕೆ?
ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಯಾರೂ ಕೂಡಾ ಆತಂಕಪಡುವ ಅಗತ್ಯವಿಲ್ಲ. ಸೋಂಕಿತರಿಗೆ ಆರಂಭದಲ್ಲಿ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಇದರ ಬೆನ್ನಲ್ಲೇ ಉಸಿರಾಟ ತೊಂದರೆ ಹೆಚ್ಚುತ್ತದೆ. ಸಾರ್ಸ್ ಎಂಬ ರೋಗವು ಜ್ವರ ಮತ್ತು ಕೆಮ್ಮಿನ ಮುನ್ಸೂಚನೆಯಾಗಿದೆ. ಇನ್ನು, ಸಾರ್ಸ್ ಎಂಬ ರೋಗದ ಸಂಯೋಜಿತ ಭಾಗವೇ ಈ ಕೊರೊನಾ ವೈರಸ್ ಎಂದು ಹೇಳಲಾಗುತ್ತಿದೆ. ಈ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆ ವಹಿಸಬೇಕು. ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಕನಿಷ್ಠ 12 ರಿಂದ 24 ಗಂಟೆಗಳ ತಪಾಸಣೆ ಬಳಿಕವಷ್ಟೇ ಕೊರೊನಾ ವೈರಸ್ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ
ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾದ ಬಳಿಕವೂ ಭಯಪಡುವ ಅಗತ್ಯವಿರುವುದಿಲ್ಲ. ದಿನನಿತ್ಯ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು. ಪದೇ ಪದೆ ಮುಖವನ್ನು ಮುಟ್ಟಿಕೊಳ್ಳುವುದು, ಕಣ್ಣುಗಳನ್ನು ಉಚ್ಚುವುದನ್ನು ಬಿಡಬೇಕು. ಇದರಿಂದ ಸೋಂಕಿನ ಪ್ರಮಾಣ ಹೆಚ್ಚದಂತೆ ತಡೆಗಟ್ಟಬಹುದು ಎಂದು ವೈದ್ಯರು ಸೂಚನೆ ನೀಡಿದ್ದಾರೆ.
53,000 ಕೊರೊನಾ ಪೀಡಿತರ ಆರೋಗ್ಯದಲ್ಲಿ ಚೇತರಿಕೆ
ವಿಶ್ವದಾದ್ಯಂತ ಮಾರಕ ಕೊರೊನಾ ವೈರಸ್ ಗೆ 3,286 ಮಂದಿ ಪ್ರಾಣ ಬಿಟ್ಟಿದ್ದು, 95,748 ಜನರಲ್ಲಿ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ. ಇನ್ನು, ಇದುವರೆಗೂ 53,423 ಮಂದಿ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸದ್ಯದ ಮಟ್ಟಿಗೆ ಕೊರೊನಾ ವೈರಸ್ ಗೆ ಯಾವುದೇ ಮದ್ದು ಕಂಡು ಹಿಡಿಯಲಾಗಿಲ್ಲ. ಮುಂದಿನ ವರ್ಷದೊಳಗೆ ಔಷಧಿ ಕಂಡು ಹಿಡಿಯುವುದಕ್ಕಾಗಿ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.
ಕೊರೊನಾದಿಂದ ಪಾರಾಗಲು ವಿಜ್ಞಾನಿಗಳ ಸಲಹೆ
ಕೊರೊನಾ ವೈರಸ್ ಪೀಡಿತ ವ್ಯಕ್ತಿಗಳಿಂದ ಕನಿಷ್ಠ 10 ಅಡಿ ಅಂತರವನ್ನು ಕಾಯ್ದುಕೊಂಡಾಗ ಮಾತ್ರ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದುಕೊಂಡೇ ಕೆಲಸ ಮಾಡುವಂತೆ (Work From Home) ವಿಜ್ಞಾನಿಗಳು ಸಲಹೆಯನ್ನು ನೀಡುತ್ತಿದ್ದಾರೆ.