ನವದೆಹಲಿಯಲ್ಲಿ ಕೊರೊನಾವೈರಸ್ 3ನೇ ಅಲೆಯ ಹೊಸ ಆತಂಕ
ನವದೆಹಲಿ, ಅಕ್ಟೋಬರ್.30: ಮಹಾಮಾರಿ ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆಯ ಎರಡನೇ ಅಲೆಯಲ್ಲಿ ನಲುಗಿದ ನವದೆಹಲಿಗೆ ಇದೀಗ ಮೂರನೇ ಅಲೆಯೂ ಅಪ್ಪಳಿಸಲಿದೆಯೇ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ನವದೆಹಲಿಯಲ್ಲಿ ಎರಡನೇ ದಿನವೂ 24 ಗಂಟೆಗಳಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಆತಂಕವನ್ನು ಹೆಚ್ಚಿಸಿದೆ. ಒಂದೇ ದಿನದಲ್ಲಿ 5739 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 3,75,753ಕ್ಕೆ ಏರಿಕೆಯಾಗಿದೆ.
ಚಳಿಗಾಲದಲ್ಲಿ ಕೊವಿಡ್-19 ಸೋಂಕು ತಗುಲಿದರೆ ಸಾವು ಪಕ್ಕಾ?
ಒಂದು ದಿನದಲ್ಲಿ ಕೊರೊನಾವೈರಸ್ ಸೋಂಕಿಗೆ 27 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 6423ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 4138 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 3,38,378 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೆಹಲಿಯಲ್ಲಿ ಕೊರೊನಾವೈರಸ್ 3ನೇ ಅಲೆ ಆತಂಕ
ದಸರಾ ಹಬ್ಬದ ಬಳಿಕ ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಯ ಮೂರನೇ ಅಲೆಯು ಶುರುವಾಗಲಿದೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆತಂಕ ವ್ಯಕ್ತಪಡಿಸಿದ್ದರು. ಮೊದಲ ಬಾರಿಗೆ ದೆಹಲಿಯಲ್ಲಿ ಒಂದೇ ದಿನದಲ್ಲಿ 5600ಕ್ಕೂ ಹೆಚ್ಚು ಸೋಂಕಿತ ಪ್ರಕರಣ ಪತ್ತೆಯಾಗಿದ್ದವು. ಅಲ್ಲಿಂದ ನಿರಂತರವಾಗಿ ಪ್ರತಿನಿತ್ಯ 5000ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ.
ಬೆಡ್ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಸೂಕ್ತ ಕ್ರಮ
ದಸರಾ ಹಬ್ಬದ ನಂತರದಲ್ಲಿ ಕೊವಿಡ್-19 ಸೋಂಕು ತಪಾಸಣೆ ವೇಗ ಮತ್ತು ವಿಧಾನವನ್ನು ಬದಲಾಯಿಸಿಕೊಳ್ಳಲಾಗುತ್ತಿದೆ. ಸೋಂಕಿತರ ಕುಟುಂಬ ಸದಸ್ಯರು ಮತ್ತು ಹತ್ತಿರದಿಂದ ಸಂಪರ್ಕ ಹೊಂದಿರುವ ಎಲ್ಲರಿಗೂ ಕೊರೊನಾವೈರಸ್ ಸೋಂಕಿತ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೊರೊನಾವೈರಸ್ ಸೋಂಕಿತರಿಗಾಗಿ ಆಸ್ಪತ್ರೆಗಳಲ್ಲಿ 10,000 ಬೆಡ್ ಗಳನ್ನು ಖಾಲಿ ಮಾಡಿಸಲಾಗಿದೆ. ಬೆಡ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸತ್ಯೇಂದರ್ ಜೈನ್ ತಿಳಿಸಿದ್ದರು.
ದೀಪಾವಳಿ ಹಬ್ಬದಿಂದಲೂ ಕೊವಿಡ್-19 ಆತಂಕ
ಕಳೆದ ಅಕ್ಟೋಬರ್.25ರಂದು ದಸರಾ ಹಬ್ಬದ ಹಿನ್ನೆಲೆ ದುರ್ಗಾ ಪೂಜೆ ಸಂಭ್ರಮದ ಬೆನ್ನಲ್ಲೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಮ್ಮಡಿಯಾಗಿದೆ. ಮುಂದಿನ ನವೆಂಬರ್ ತಿಂಗಳಿನಲ್ಲಿ ದೀಪಾವಳಿ ಹಬ್ಬ ಕೂಡಾ ಬರಲಿದ್ದು, ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ. ಕೊವಿಡ್-19 ಅಷ್ಟೇ ಅಲ್ಲದೇ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕೂಡಾ ಹಾಳಾಗುತ್ತಿದ್ದು, ವಾಯುಮಾಲಿನ್ಯ ನಿಯಂತ್ರಣಕ್ಕೂ ಕ್ರಮ ತೆಗೆದುಕೊಳ್ಳಬೇಕಾದ ಸವಾಲು ಎದುರಾಗಿದೆ.
ಭಾರತದಲ್ಲಿ 81 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 48648 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಒಂದು ದಿನದಲ್ಲಿ 57,386 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 563 ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 80,88,851ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,21,090 ಮಂದಿ ಪ್ರಾಣ ಬಿಟ್ಟಿದ್ದಾರೆ. 73,73,375 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 5,94,386 ಸಕ್ರಿಯ ಪ್ರಕರಣಗಳಿವೆ.
Recommended Video