ಇದೆಂಥ ಪುಂಡಾಟ? ಸಂಸತ್ತಿನಲ್ಲೇ ಸಂವಿಧಾನದ ಪ್ರತಿ ಹರಿದ ಸಂಸದರು!
ನವದೆಹಲಿ, ಆಗಸ್ಟ್ 05: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಸಂಸತ್ತಿನಲ್ಲಿ ಸಂಸದರು ಸಂವಿಧಾನದ ಪ್ರತಿಯನ್ನು ಹರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ
ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ದಾರಿಗಳು ಹಲವಾರಿವೆ. ಆದರೆ ದೇಶದ ಶಕ್ತಿ ಕೇಂದ್ರ, ಪ್ರಜಾಪ್ರಭುತ್ವದ ದೇವಾಲಯ ಎಂದೇ ಕರೆಯಲ್ಪಡುವ ಸಂಸತ್ತಿನಲ್ಲಿ, ಸಂವಿಧಾನದ ಪ್ರತಿಯನ್ನು ಹರಿವ ಅತಿರೇಕದ ವರ್ತನೆಯ ಅಗತ್ಯವಿತ್ತೇ ಎಂಬುದು ಜನಸಾಮಾನ್ಯರ ಪ್ರಶ್ನೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಣಯ ರಾಜ್ಯ ಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆಯೇ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಸಂಸದ ಮಿರ್ ಮೊಹಮ್ಮದ್ ಫಯಾಜ್ ತಮ್ಮ ಕೈಯಲ್ಲಿದ್ದ ಭಾರತೀಯ ಸಂವಿಧಾನದ ಪ್ರತಿಯನ್ನು ಹರಿದುಹಾಕಿದರು. ಅವರ ನಡೆಯಿಂದ ಅಸಮಾಧಾನಗೊಂಡ ರಾಜ್ಯ ಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಕೂಡಲೇ ಸದನದಿಂದ ಆಚೆ ಹೋಗುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಿಡಿಪಿಯ ಇನ್ನೋರ್ವ ಸಂಸದ ನಾಜಿರ್ ಅಹ್ಮದ್, ಫಯಾಜ್ ಅವರೊಂದಿಗೆ ಸೇರಿ ತಮ್ಮ ಖುರ್ತಾವನ್ನು ಹರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಸಂಸದರ ಈ ಪುಂಡಾಟಕ್ಕೆ ಸಂಸತ್ತು ಸಾಕ್ಷಿಯಾಯಿತು!