ಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿ
ನವದೆಹಲಿ, ಜನವರಿ 07: ಕೊರೊನಾ ಸೋಂಕಿನ ನಡುವೆ ದೇಶದಲ್ಲಿ ಈಗ ಹಕ್ಕಿ ಜ್ವರದ ಆತಂಕವೂ ಎದುರಾಗಿದೆ. ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿದ್ದು, ದಿನೇ ದಿನೇ ಸಾವಿರಾರು ಸಂಖ್ಯೆಯಲ್ಲಿ ಹಕ್ಕಿಗಳು ಸಾವನ್ನಪ್ಪುತ್ತಿವೆ.
ಆದರೆ ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಮಾಂಸಾಹಾರ ಸೇವನೆ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ಹೈನುಗಾರಿಕೆ, ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಸಲಹೆ ನೀಡಿದ್ದಾರೆ. ಹಕ್ಕಿ ಜ್ವರದಿಂದ ದೂರ ಉಳಿಯಲು ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಆ ಸಲಹೆಗಳೇನು? ಮುಂದೆ ಓದಿ...
ಹಕ್ಕಿ ಜ್ವರ: ರಾಜ್ಯದ ಈ ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದ ರಾಜ್ಯ ಸರ್ಕಾರ!
ಮನುಷ್ಯರಲ್ಲಿ ಈ ವೈರಸ್ ಕಂಡುಬಂದಿಲ್ಲ
ಹಕ್ಕಿ ಜ್ವರದ ವೈರಸ್ H5N8 ಮನುಷ್ಯರಲ್ಲಿ ಕಂಡುಬಂದಿಲ್ಲ. ಆದರೆ ಆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಮೊಟ್ಟೆ ಹಾಗೂ ಮಾಂಸವನ್ನು ಪೂರ್ಣಪ್ರಮಾಣದಲ್ಲಿ ಬೇಯಿಸಿ ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ. ಕೆಲವು ಕಡೆಗಳಲ್ಲಿ ವಲಸೆ ಹಕ್ಕಿಗಳು ಹಾಗೂ ಕಾಡು ಹಕ್ಕಿಗಳು ಕೂಡ ಸಾವನ್ನಪ್ಪುತ್ತಿವೆ. ಹಕ್ಕಿ ಜ್ವರದ ಭೀತಿ ಇರುವುದರಿಂದ ಮಾಂಸವನ್ನು ಸಂಪೂರ್ಣ ಬೇಯಿಸದೇ ತಿನ್ನಬೇಡಿ ಎಂದು ಹೇಳಿದ್ದಾರೆ.
ಎಲ್ಲೆಲ್ಲಿ ಹಕ್ಕಿ ಜ್ವರ ಪ್ರಕರಣಗಳಿವೆ?
ಹಿಮಾಚಲ ಪ್ರದೇಶ, ಮಧ್ಯ ಪ್ರರದೇಶ, ಕೇರಳ ಹಾಗೂ ರಾಜಸ್ಥಾನದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿವೆ. ಕಳೆದ ಹತ್ತು ದಿನಗಳಿಂದ ಈ ರಾಜ್ಯಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪಕ್ಷಿಗಳು ಸಾವನ್ನಪ್ಪಿವೆ.
ಹಕ್ಕಿಗಳನ್ನು ಕೊಲ್ಲಲು ಆದೇಶ
ಕೆಲವು ಕಡೆಗಳಲ್ಲಿ ಹಕ್ಕಿಗಳನ್ನು ಕೊಲ್ಲಲು ಆದೇಶಿಸಲಾಗಿದೆ. ಕೋಳಿ ಮಾಂಸ ಹಾಗೂ ಮಾಂಸ ಉತ್ಪನ್ನಗಳ ಮಾರಾಟದ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಹಕ್ಕಿ ಜ್ವರ ಪತ್ತೆಯಾಗಿರುವ ಸುತ್ತ ಮುತ್ತಲ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಕಂಟ್ರೋಲ್ ರೂಂ ಸ್ಥಾಪನೆ
ಹಕ್ಕಿ ಜ್ವರದ ಪ್ರಕರಣಗಳಿಗೆ ಸಂಬಂಧೀಸಿದಂತೆ, ಈ ಪರಿಸ್ಥಿತಿಯನ್ನು ನಿಭಾಯಿಸಲು, ರಾಜ್ಯ ಸರ್ಕಾರಗಳ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ಕಂಟ್ರೋಲ್ ರೂಂ ಸ್ಥಾಪಿಸಿದೆ. ಜೈವಿಕ ಭದ್ರತಾ ನಿಯಮಗಳು, ವೈಯಕ್ತಿಕ ನೈರ್ಮಲ್ಯ ಮತ್ತು ಸ್ವಚ್ಛತೆ ಹಾಗೂ ಸೋಂಕುನಿವಾರಕ ಶಿಷ್ಟಾಚಾರಗಳ ನಿರ್ವಹಣೆ, ಅಡುಗೆ ಮತ್ತು ಸಂಸ್ಕರಣಾ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಕ್ಕಿ ಜ್ವರದ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಲಹೆ ನೀಡಿದೆ.