ಭಾರತದಲ್ಲಿ ಇದೊಂದು ಚಿಕಿತ್ಸೆ ನೀಡಿದ್ರೆ ಕೊರೊನಾ ಮಂಗಮಾಯ?
ನವದೆಹಲಿ, ಏಪ್ರಿಲ್.23: ಕೊರೊನಾ ವೈರಸ್ ಸೋಂಕಿತರಿಗೆ ದೇಶಾದ್ಯಂತ ಇರುವ ಏಮ್ಸ್ ಆಸ್ಪತ್ರೆಯ ವಿವಿಧ ಕೇಂದ್ರಗಳಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಈಗಾಗಲೇ ಆರಂಭಿಸಲಾಗಿದೆ. ಇನ್ನೊಂದು ಕಡೆಯಲ್ಲಿ ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಿಂದ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ. ಸಾಕಷ್ಟು ಮಂದಿ ಸ್ವಯಂಪ್ರೇರಿತರಾಗಿ ರಕ್ತ ನೀಡಲು ಮುಂದಾಗಿದ್ದಾರೆ ಎಂದು ಗುಲೇರಿಯಾ ಹೇಳಿದರು.
Coronavirus Alert: ದುಬೈ To ಬೆಂಗಳೂರು ಪ್ರಯಾಣಿಕರೇ ಆಸ್ಪತ್ರೆಗೆ ಬನ್ನಿ!
ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿ ಸಂಶೋಧನೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸೇರಿದಂತೆ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಬದಲು ಪರ್ಯಾಯ ಔಷಧಿಗಾಗಿ ಶೋಧ ಮುಂದುವರಿಯುತ್ತಿದೆ ಎಂದರು.
ಕೀಳು ಮನೋಭಾವ ತೊರೆದರೆ ಪರಿಹಾರ
ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳ ಬಗ್ಗೆ ಯಾವುದೇ ರೀತಿ ಕೀಳು ಮನೋಭಾವವನ್ನು ಹೊಂದಿರಬಾರದು. ಬದಲಿಗೆ ಸೋಂಕಿನಿಂದ ಶೇ.90-95ರಷ್ಟು ನಿವಾರಣೆಯಾದ ಜನರಿಂದ ರಕ್ತದ ಮಾದರಿಯನ್ನು ಸಂಗ್ರಹಿಸುವುದು. ಅದೇ ರಕ್ತವನ್ನು ಗಂಭೀರ ಸ್ಥಿತಿಯಲ್ಲಿ ಇರುವ ಕೊರೊನಾ ಸೋಂಕಿತರಿಗೆ ಇಂಜೆಕ್ಟ್ ಮಾಡುವುದರಿಂದ ರೋಗ ನಿಯಂತ್ರಿಸುವ ಶಕ್ತಿ ವೃದ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಗುಲೇರಿಯಾ ತಿಳಿಸಿದ್ದಾರೆ.
ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ವಿಧಾನ ಹೇಗಿರುತ್ತದ?
ಕೊರೊನಾ ವೈರಸ್ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಗಳ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಈ ರಕ್ತವನ್ನು ಗಂಭೀರ ಸ್ಥಿತಿಯಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರಿಗೆ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನವನ್ನು ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ.
ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಯ ಎಫೆಕ್ಟ್ ಹೇಗಿರುತ್ತೆ?
ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ. ಅಂಥ ವ್ಯಕ್ತಿಗಳ ರಕ್ತವನ್ನು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ನೀಡುವುದರಿಂದ ಅವರಲ್ಲೂ ವೈರಸ್ ಗಳ ವಿರುದ್ಧ ಹೋರಾಡಬಲ್ಲ ಶಕ್ತಿ ವೃದ್ಧಿಸುತ್ತದೆ. ಒಮ್ಮೆ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಆತನ ರಕ್ತವನ್ನು ಸೋಂಕಿತನಿಗೆ ನೀಡುವುದರಿಂದ ರೋಗಿಯಲ್ಲೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವ ಸಾಧ್ಯತೆಯಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿಕಿತ್ಸೆಯಲ್ಲಿ ವಿಳಂಬ ತೋರಿದರೆ ಅಪಾಯ ನಿಶ್ಚಿತ
ಕೊರೊನಾ ವೈರಸ್ ಸೋಂಕು ಮೂರನೇ ಹಂತಕ್ಕೆ ತಲುಪುವಷ್ಟರಲ್ಲೇ ಎಚ್ಚರಿಕೆ ವಹಿಸಬೇಕು. ಚಿಕಿತ್ಸಾ ವಿಧಾನದಲ್ಲಿ ವಿಳಂಬ ತೋರಿದಷ್ಟು ಅಪಾಯ ಹೆಚ್ಚುತ್ತದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.