ವಿವಾದಾತ್ಮಕ ಹೇಳಿಕೆ: ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲು
ನವದೆಹಾಲಿ, ನವೆಂಬರ್ 21: ಪದೇ ಪದೇ ವಿವಾದಾತ್ಮಕ ಹೇಳಿಕೆಗಳಿಂದ ಜನರ ಆಕ್ರೋಶಕ್ಕೆ ಗುರಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೂರು ದಾಖಲಾಗಿದೆ. ಇಡೀ ಸಿಖ್ ಸಮುದಾಯವನ್ನು ಖಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು "ಸೊಳ್ಳೆಗಳಂತೆ" ತನ್ನ ಶೂ ಅಡಿಯಲ್ಲಿ ತುಳಿದಿದ್ದಾರೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಆರೋಪಿಸಿದ ನಟಿ ಕಂಗನಾ ರಣಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ದೆಹಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯ ಸೈಬರ್ ಸೆಲ್ನಲ್ಲಿ ರಣಾವತ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅಕಾಲಿದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ನಟಿ ಕಂಗನಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ನಟಿ ಕಂಗನಾ ರಣಾವತ್ ಇತ್ತೀಚಿನ ಪೋಸ್ಟ್ನಲ್ಲಿ 'ಉದ್ದೇಶಪೂರ್ವಕವಾಗಿ' ರೈತರ ಪ್ರತಿಭಟನೆಯನ್ನು "ಖಲಿಸ್ತಾನಿ ಚಳುವಳಿ" ಎಂದು ಬಿಂಬಿಸಿದ್ದಾರೆ. ಜೊತೆಗೆ ನಟ ಸಿಖ್ ಸಮುದಾಯದ ವಿರುದ್ಧ "ಅವಹೇಳನಕಾರಿ ಮತ್ತು ಅವಮಾನಕರ" ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಿದೆ.
ಇಂದಿರಾ ಗಾಂಧಿಯವರನ್ನು ನೆನೆದ ಪದ್ಮಶ್ರೀ ಪುರಸ್ಕೃತೆ ಕಂಗನಾ ರಣಾವತ್ ಮತ್ತೊಮ್ಮೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದಿರಾ ಗಾಂಧಿ ಅವರು ಖಲೀಸ್ತಾನಿಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಅಂದಿನ ಕಾಲದಲ್ಲಿ ತೆಗೆದುಕೊಂಡಿದ್ದರು. ಖಲಿಸ್ತಾನಿಗಳನ್ನು ಮಟ್ಟ ಹಾಕುವುದಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು ಎಂದು ರಣಾವತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಉಲ್ಲೇಖಿಸದೇ, "ಭಾರತವನ್ನು ಇಬ್ಭಾಗ ಮಾಡುವುದಕ್ಕೆ ನೋಡುತ್ತಿದ್ದವರನ್ನು ಅವಳು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದು ಹಾಕಿದ್ದಾಳೆ", ಎಂದು ರಣಾವತ್ ಬರೆದುಕೊಂಡಿದ್ದಾರೆ.
"ಖಲೀಸ್ತಾನಿಗಳು ಇಂದು ಸರ್ಕಾರದ ಕೈಗಳನ್ನು ತಿರುವುವ ಕೆಲಸವನ್ನು ಮಾಡುತ್ತಿರಬಹುದು. ಆದರೆ ಆ ಒಬ್ಬ ಮಹಿಳೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ. ಅದೊಬ್ಬ ಮಹಿಳಾ ಪ್ರಧಾನಮಂತ್ರಿಯು ಅಂಥವರನ್ನು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದಿದ್ದಾರೆ. ಅವರನ್ನು ಸೊಳ್ಳೆಗಳಂತೆ ತುಳಿದು ಹಾಕುವುದಕ್ಕೆ ತಮ್ಮ ಜೀವವನ್ನೂ ಪಣಕ್ಕಿಟ್ಟಿದ್ದರು. ಆದರೆ ದೇಶವು ಇಬ್ಭಾಗವಾಗುವುದಕ್ಕೆ ಬಿಡಲಿಲ್ಲ. ಖಲೀಸ್ತಾನಿಗಳು ಇಂದಿಗೂ ಆಕೆಯ ಹೆಸರನ್ನು ಕೇಳಿದರೆ ಸಾಕು ಬೆವರುತ್ತಾರೆ, ಅವರಿಗೆ ಅಂಥ ಗುರು ಬೇಕು," ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದಾರೆ.
ದೇಶದಲ್ಲಿ ಪ್ರತಿಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿರುವ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್, ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ರದ್ದು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. "ದುಃಖಕರ, ನಾಚಿಕೆಗೇಡಿನ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸಂಸತ್ತಿನಲ್ಲಿ ಆಯ್ಕೆಯಾದ ಸರ್ಕಾರ ಯಾಕೆ. ಆಗ ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು," ಎಂದು ಕಂಗನಾ ರಣಾವತ್ ಬರೆದಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಈ ಹಿಂದೆ "1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದರು. ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.