1 ರೂ ದಂಡ ಕಟ್ಟಿದ ಮಾತ್ರಕ್ಕೆ ಸುಪ್ರೀಂಕೋರ್ಟ್ ತೀರ್ಪು ಒಪ್ಪಿದ್ದೇನೆ ಎಂದಲ್ಲ: ಪ್ರಶಾಂತ್ ಭೂಷಣ್
ನವದೆಹಲಿ, ಸೆಪ್ಟೆಂಬರ್ 14: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಂಕೇತಿಕವಾಗಿ ವಿಧಿಸಿದ 1 ರೂ. ದಂಡವನ್ನು ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಪಾವತಿಸಿದ್ದಾರೆ. ಆದರೆ ಈ ದಂಡ ಪಾವತಿಯು ತಾವು ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂಬ ಅರ್ಥವಲ್ಲ. ಈ ತೀರ್ಪಿನ ವಿರುದ್ಧ ಪರಾಮರ್ಶನಾ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನು ಅಣಕಿಸಿ ಟ್ವೀಟ್ ಮಾಡಿದ್ದಕ್ಕಾಗಿ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕಾಗಿ ಸೆ. 15ರ ಒಳಗೆ 1 ರೂ ದಂಡವನ್ನು ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
1 ರೂ. ದಂಡ: ವಕೀಲ ಪ್ರಶಾಂತ್ ಭೂಷಣ್ ಪ್ರತಿಕ್ರಿಯೆ ಏನು?
'ನಾನು ದಂಡ ಪಾವತಿಸುತ್ತಿದ್ದೇನೆ ಎಂಬ ಕಾರಣಕ್ಕೆ ನಾನು ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ಅರ್ಥೈಸಬಾರದು. ನಾವು ಇಂದು ಪರಾಮರ್ಶನಾ ಅರ್ಜಿ ಸಲ್ಲಿಸುತ್ತಿದ್ದೇವೆ. ನ್ಯಾಯಾಂಗ ನಿಂದನೆ ಪ್ರಕರಣದ ಅಡಿಯ ಶಿಕ್ಷೆಯನ್ನು ಪ್ರಶ್ನಿಸಲು ಸೃಷ್ಟಿಸಿರುವ ಪ್ರಕ್ರಿಯೆಯಂತೆ ನಾವು ರಿಟ್ ಅರ್ಜಿ ಸಲ್ಲಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
'ಅಸಮ್ಮತಿಯ ಧ್ವನಿಗಳನ್ನು ಅಡಗಿಸಲು ವ್ಯವಸ್ಥೆ ಎಲ್ಲ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ. ಸರ್ಕಾರದ ವಿಚಾರಣೆಗೆ ಒಳಪಡುವ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು 'ಟ್ರುತ್ ಫಂಡ್'ಅನ್ನು ಬಳಸಿಕೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದಿಂದ 1 ರೂ ದಂಡದವರೆಗೆ: ಪ್ರಶಾಂತ್ ಭೂಷಣ್ ಬದುಕಿನ ಚಿತ್ರಣ
ಸುಪ್ರೀಂಕೋರ್ಟ್ ಅಥವಾ ನ್ಯಾಯಾಂಗ ವ್ಯವಸ್ಥೆಯನ್ನು ಅಗೌರವಿಸುವ ಯಾವುದೇ ಉದ್ದೇಶ ತಮ್ಮ ಟ್ವೀಟ್ಗಳಲ್ಲಿ ಇರಲಿಲ್ಲ. ಆದರೆ ನ್ಯಾಯಾಲಯವು ತನ್ನ ಕಾರ್ಯದಿಂದ ದಿಕ್ಕು ಬದಲಿಸಿದ್ದರ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾಗಿತ್ತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದರು.
ಸೆ. 15ರ ಒಳಗೆ ದಂಡ ಠೇವಣಿ ಇರಿಸದೆ ಹೋದರೆ ಪ್ರಶಾಂತ್ ಭೂಷಣ್ ಅವರು ಮೂರು ತಿಂಗಳ ಜೈಲು ಶಿಕ್ಷೆ ಅಥವಾ ಮೂರು ವರ್ಷ ವಕೀಲಿಕೆಯಿಂದ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.