'ಶೀಘ್ರ ಗುಣಮುಖರಾಗಿ': ಗಾಂಧಿಗಳನ್ನು ಟೀಕಿಸಿದ ಕಪಿಲ್ ವಿರುದ್ದ ಪ್ರತಿಭಟನೆ, ಕಾರಿಗೆ ಹಾನಿ
ನವದೆಹಲಿ, ಸೆಪ್ಟೆಂಬರ್ 29: ರಾಹುಲ್ ಗಾಂಧಿ, ಸೋನಿಯಾ ಗಾಂಧಿಗಳ ವಿರುದ್ದವಾಗಿ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕಪಿಲ್ ಸಿಬಲ್ ನಿವಾಸದ ಹೊರಗಡೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾರಿಗೆ ಹಾನಿಯಾಗಿದೆ.
"ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಹಾಗಾಗಿ ಈ ಎಲ್ಲಾ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ" ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಭಾರೀ ಆಕ್ರೋಶಕ್ಕೆ ಒಳಗಾಗಿದ್ದಾರೆ. ನವದೆಹಲಿಯಲ್ಲಿರುವ ಕಪಿಲ್ ಸಿಬಲ್ ಮನೆಯ ನಿವಾಸದ ಬಳಿ ನೆರೆದ ಕಾಂಗ್ರೆಸ್ ಕಾರ್ಯಕರ್ತರು ಕಪಿಲ್ ಸಿಬಲ್ ಅವರ ಕಾರಿಗೆ ಟೊಮೆಟೋವನ್ನು ಎಸೆದಿದ್ದು, ಕಾರಿಗೆ ಹಾನಿಯಾಗಿದೆ.
ವಿಡಿಯೋ; ನಮ್ಮ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ; ಕಪಿಲ್ ಸಿಬಲ್
ಇನ್ನು ಕಾಂಗ್ರೆಸ್ ಕಾರ್ಯಕರ್ತರುಗಳು "ಕಪಿಲ್ ಸಿಬಲ್ ಕಾಂಗ್ರೆಸ್ ಪಕ್ಷವನ್ನು ತೊರೆಯಿರಿ" ಎಂದು ಘೋಷಣೆಯನ್ನು ಕೂಗಿದ್ದಾರೆ. ಹಾಗೆಯೇ "ನೀವು ನಿಜ ಪರಿಸ್ಥಿತಿಗೆ ಬನ್ನಿ" ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ಪರ ಜಯಕಾರವೂ ಹಾಕಿದ್ದಾರೆ. "ಕಪಿಲ್ ಸಿಬಲ್ ಶೀಘ್ರವೇ ಗುಣಮುಖರಾಗಿರಿ" ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ನ ವಿಚಾರದಲ್ಲಿ ಮಾಧ್ಯಮಗಳ ವರದಿಯ ಬಗ್ಗೆ ಮಾತನಾಡಿದ್ದು, "ಕಾಂಗ್ರೆಸ್ನಲ್ಲಿ ಯಾರೂ ಕೂಡಾ ಚುನಾಯಿತ ಅಧ್ಯಕ್ಷರೇ ಇಲ್ಲ. ಹಾಗಾದರೆ ಈ ನಿರ್ಧಾರವನ್ನು ಕೈಗೊಳ್ಳುತ್ತಿರುವವರು ಯಾರು?. ನಮಗೆ ಕಾಂಗ್ರೆಸ್ ಪಕ್ಷದಲ್ಲಿ ಈಗ ನಿರ್ಧಾರ ಕೈಗೊಳ್ಳುತ್ತಿರುವವರು ಯಾರು ಎಂದೇ ತಿಳಿದಿಲ್ಲ," ಎಂದು ಹೇಳಿದ್ದಾರೆ. "ನಾವು (ಜಿ 23 ಮುಖಂಡರು) ಪಕ್ಷ ತೊರೆದು ಬೇರೆ ಎಲ್ಲೂ ಹೋಗುವವರಲ್ಲ. ಯಾರು ಪಕ್ಷದ ನಾಯಕತ್ವಕ್ಕೆ ಹತ್ತಿರದಲ್ಲಿದ್ದಾರೋ ಅವರು ಪಕ್ಷ ತೊರೆದರು. ಯಾರನ್ನು ಹತ್ತಿರದವರು ಎಂದು ಭಾವಿಸಲಿಲ್ಲವೋ ಅವರು ಇನ್ನೂ ಜೊತೆಗೆ ನಿಂತಿದ್ದಾರೆ" ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಮಾಜಿ ಸಂಸದೆ ಟಿಎಂಸಿ ಸೇರ್ಪಡೆ: ಕೇಂದ್ರ ನಾಯಕತ್ವದ ವಿರುದ್ದ ಸಿಬಲ್ ವಾಕ್ ಪ್ರಹಾರ
ಇನ್ನು ತನ್ನ ಪಕ್ಷದ ಕಾರ್ಯಕರ್ತರೇ ತನ್ನ ವಿರುದ್ದ ಪ್ರತಿಭಟನೆ ನಡೆಸಿರುವ ಬಗ್ಗೆ ಮಾತನಾಡಿದ ಕಪಿಲ್ ಸಿಬಲ್, "ನಾನು ಈ ನಾಟಕದಿಂದ ಗಲಿಬಿಲಿಗೊಳ್ಳುವುದಿಲ್ಲ. ನಾನು ತುಂಬಾ ಜಾಗರೂಕವಾಗಿ ಮಾತನಾಡಿದ್ದೇನೆ," ಎಂದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇತರರ ಮಾತುಗಳನ್ನು ಆಲಿಸುತ್ತಿಲ್ಲ. ತಮ್ಮದೇ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ನಲ್ಲಿ ಸುಮಾರು 23 ಭಿನ್ನಮತೀಯರು ಜೊತೆಯಾಗಿ ಇತ್ತೀಚೆಗೆ ನಾಯಕತ್ವದ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಜನರನ್ನು ಹಾಗೂ ಇತರೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿ ಇತ್ತೀಚೆಗೆ ಕಪಿಲ್ ಸಿಬಲ್ ತನ್ನ ಹುಟ್ಟು ಹಬ್ಬದ ದಿನದಂದು ಔತಣಕೂಟದೊಂದಿಗೆ ಸಭೆಯನ್ನು ನಡೆಸಿದ್ದರು.
#WATCH | Workers of Delhi Congress protest against senior party leader Kapil Sibal outside his residence in New Delhi, hours after Sibal reiterated demands for sweeping reforms raised by G-23 leaders; show placards reading 'Get Well Soon Kapil Sibal' pic.twitter.com/6A1dNrbuLT
— ANI (@ANI) September 29, 2021
ಇತ್ತೀಚೆಗೆ ಕಾಂಗ್ರೆಸ್ ತನ್ನ ಹಲವು ನಾಯಕರನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರು ಬೇರೆ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ. ಸುಶ್ಮಿತಾ ದೇಬ್, ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದು ಹಾಗೂ ಅನುಭವಿ ಕಾಂಗ್ರೆಸ್ ಹಿರಿಯ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜೆನೊ ಫಲೆರೊ ಕಾಂಗ್ರೆಸ್ ಅನ್ನು ತೊರೆದಿದ್ದಾರೆ. ಕಳೆದ ವರ್ಷ ರಾಹುಲ್ ಗಾಂಧಿಯ ಆಪ್ತರಲ್ಲಿ ಒಬ್ಬರಾದ ಜೋತಿರಾದಿತ್ಯ ಸಿಂಧಿಯಾ ಸಿಧು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಆರಂಭವಾಗಿದೆ. ಆದರೆ ಮತ್ತೆ ಕಾಂಗ್ರೆಸ್ಗೆ ಬಂದ ಜೋತಿರಾದಿತ್ಯ ಸಿಂಧಿಯಾ ಸಿಧು ಈಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗೆ ಕಾಂಗ್ರೆಸ್ನ ನಾಯಕತ್ವ ಕಾರಣ ಎಂದು ಈ ಹಿಂದೆಯೂ ಕಪಿಲ್ ಸಿಬಲ್ ಆರೋಪ ಮಾಡಿದ್ದಾರೆ. ಇಂದು ಕೂಡಾ ಅದೇ ಆರೋಪವನ್ನು ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)