ಕಾಶ್ಮೀರ ವಿಚಾರದಲ್ಲಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಡೆ
ನವದೆಹಲಿ, ಅಕ್ಟೋಬರ್ 10: ಕಾಂಗ್ರೆಸ್ನ ಇಂಗ್ಲೆಂಡ್ ಪ್ರತಿನಿಧಿಗಳ ನಿಯೋಗವು ಅಲ್ಲಿನ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಅವರನ್ನು ಭೇಟಿ ಮಾಡಿ ಕಾಶ್ಮೀರದ ವಿಚಾರ ಚರ್ಚಿಸಿರುವುದು ವಿವಾದ ಸೃಷ್ಟಿಸಿದೆ.
ಜಮ್ಮು ಮತ್ತು ಕಾಶ್ಮೀರದ ಆಂತರಿಕ ವಿಚಾರವನ್ನು ಕಾಂಗ್ರೆಸ್ ಲಾಭ ಪಡೆದುಕೊಳ್ಳಲು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಲು ಹೊರಟಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಬಿಜೆಪಿ ಆರೋಪಗಳನ್ನು ನಿರಾಕರಿಸಿರುವ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ.
ಕಾಶ್ಮೀರ ವಿಷಯದಲ್ಲಿ ತಲೆಹಾಕಬೇಡಿ: ಚೀನಾಕ್ಕೆ ಭಾರತದ ವಾರ್ನಿಂಗ್
ಕಾಂಗ್ರೆಸ್ ನಾಯಕರ ನಿಯೋಗದ ಭೇಟಿಯ ಬಳಿಕ ಜೆರೆಮಿ ಕಾರ್ಬಿನ್, 'ಭಾರತೀಯ ಕಾಂಗ್ರೆಸ್ ಪಕ್ಷದ ಯುಕೆ ಪ್ರತಿನಿಧಿಗಳೊಂದಿಗೆ ಬಹಳ ಫಲಪ್ರದ ಸಭೆ ನಡೆಯಿತು. ಕಾಶ್ಮೀರದಲ್ಲಿನ ಮಾನವಹಕ್ಕುಗಳ ಸ್ಥಿತಿಗತಿಯ ಬಗ್ಗೆ ನಾವು ಚರ್ಚಿಸಿದೆವು. ಕಾಶ್ಮೀರದಲ್ಲಿ ಹಿಂಸಾಚಾರದ ಚಕ್ರ ಮತ್ತು ಈ ಪ್ರದೇಶದಲ್ಲಿ ಸುದೀರ್ಘ ಕಾಲದಿಂದ ಇರುವ ಭಯವನ್ನು ಅಂತ್ಯಗೊಳಿಸಬೇಕಿದೆ' ಎಂದು ಟ್ವೀಟ್ ಮಾಡಿದ್ದರು.
'ಭಾರತದ ಕುರಿತು ವಿದೇಶಗಳ ನಾಯಕರಿಗೆ ಕಾಂಗ್ರೆಸ್ ತನ್ನ ನಾಯಕರು ಏನು ಹೇಳುತ್ತಿದ್ದಾರೆ ಎಂದು ಭಾರತದ ಜನರಿಗೆ ವಿವರಿಸಬೇಕಿದೆ. ಇಂತಹ ನಾಚಿಕೆಗೇಡಿನ ನಡೆ ತೆಗೆದುಕೊಂಡಿರುವ ಕಾಂಗ್ರೆಸ್ಗೆ ಭಾರತವು ಕಠಿಣ ಉತ್ತರ ನೀಡಲಿದೆ' ಎಂದು ಬಿಜೆಪಿ ಹೇಳಿದೆ.
ಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸಿಗರಿಗೆ ಮುಕ್ತ
ಈ ವಿವಾದಕ್ಕೆ ಸ್ಪಷ್ಟೀಕರಣ ನೀಡಿರುವ ಕಾಂಗ್ರೆಸ್ನ ವಿದೇಶಿ ಘಟಕ, ಲೇಬರ್ ಪಕ್ಷವು ಕಾಶ್ಮೀರ ವಿಚಾರಕ್ಕೆ ತೆಗೆದುಕೊಂಡ ನಿರ್ಣಯವನ್ನು ಖಂಡಿಸಲು ಈ ಸಭೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಆಂತರಿಕ ವಿಚಾರ ಮತ್ತು ಹೊರಗಿನವರ ಹಸ್ತಕ್ಷೇಪ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ.
ನಾವು ಜೆರೆಮಿ ಅವರ ಟ್ವೀಟ್ಅನ್ನು ನಿರಾಕರಿಸುತ್ತೇವೆ. ಕಾಶ್ಮೀರದ ಕುರಿತು ಲೇಬರ್ ಪಕ್ಷದ ನಿರ್ಣಯವು ಸೂಕ್ತವಾಗಿಲ್ಲ ಎಂದು ಅವರಿಗೆ ಹೇಳಿದ್ದೇವಷ್ಟೇ ಎಂದು ಕಾಂಗ್ರೆಸ್ ಹೇಳಿದೆ.