ಬಿಜೆಪಿ ಮೇಲೆ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿದೆ: ಕಪಿಲ್ ಸಿಬಲ್
ನವದೆಹಲಿ, ಆಗಸ್ಟ್ 27: ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹ ಇನ್ನೂ ಶಮನಗೊಂಡಿಲ್ಲ. ಪಕ್ಷಕ್ಕೆ ಪೂರ್ಣಾವಧಿ ನಾಯಕತ್ವದ ಅಗತ್ಯವಿದೆ ಎಂದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ದರು. ಇದು ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತೀವ್ರ ಚರ್ಚೆಗೊಳಗಾಗಿತ್ತು.
ಹೀಗೆ ಪತ್ರ ಬರೆದಿದ್ದ 23 ನಾಯಕರ ಪೈಕಿ ಪ್ರಮುಖ ಸದಸ್ಯರಾದ ಕಪಿಲ್ ಸಿಬಲ್, ಪಕ್ಷವು ತನ್ನದೇ ಸದಸ್ಯರಾದ ಜಿತಿನ್ ಪ್ರಸಾದ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್ಗಳೊಂದಿಗೆ ಬಿಜೆಪಿಯನ್ನು ಗುರಿಯಾಗಿರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬ ಅನಿವಾರ್ಯ: ಸತೀಶ್ ಜಾರಕಿಹೊಳಿ
ಕೇಂದ್ರದ ಮಾಜಿ ಸಚಿವರಲ್ಲಿ ಒಬ್ಬರಾಗಿರುವ ಜಿತಿನ್ ಪ್ರಸಾದ, ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಹಾಗೂ ಇತರೆ ಬದಲಾವಣೆಗಳನ್ನು ತರಬೇಕು ಎಂದು ಒತ್ತಾಯಿಸಿ ಪತ್ರ ಬರೆದಿದ್ದ ಹಿರಿಯ ಮುಖಂಡರಲ್ಲಿ ಒಬ್ಬರು. ಈ ಪತ್ರ ಬರೆದಿದ್ದ ಸಮಯ, ಅದು ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದು ಸೇರಿದಂತೆ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ 23 ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಈ ಸಭೆಗೆ ವಿಶೇಷ ಆಹ್ವಾನಿತರಾಗಿದ್ದವರಲ್ಲಿ ಜಿತಿನ್ ಪ್ರಸಾದ ಕೂಡ ಇದ್ದರು.
ಉತ್ತರ ಪ್ರದೇಶದಲ್ಲಿ ಜಿತಿನ್ ಪ್ರಸಾದ ಅವರನ್ನು ಪಕ್ಷದಿಂದಲೇ ಟಾರ್ಗೆಟ್ ಮಾಡಲಾಗುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ತನ್ನದೇ ಪಕ್ಷದ ಸದಸ್ಯರನ್ನು ಟಾರ್ಗೆಟ್ ಮಾಡುವ ಬದಲಾಗಿ ಬಿಜೆಪಿಯನ್ನು ಗುರಿಯಾಗಿರಿಸಿ ಸರ್ಜಿಕಲ್ ಸ್ಟ್ರೈಕ್ಗಳನ್ನು ಮಾಡಬೇಕಿದೆ ಎಂದು ಸಿಬಲ್ ಹೇಳಿದರು.