ಸಾವರ್ಕರ್ರನ್ನು ಹೊಗಳಿದ ಹಿರಿಯ ಮುಖಂಡ: ಕಾಂಗ್ರೆಸ್ಗೆ ಮುಜುಗರ
ನವದೆಹಲಿ, ಅಕ್ಟೋಬರ್ 21: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ 'ಭಾರತ ರತ್ನ' ಕೊಡುವ ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಭಾರಿ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ಪಕ್ಷದ ಪ್ರಮುಖ ಮುಖಂಡರು ಸಾವರ್ಕರ್ ಅವರನ್ನು ಹೊಗಳುವ ಮೂಲಕ ಕಾಂಗ್ರೆಸ್ಗೆ ಮುಜುಗರ ಉಂಟುಮಾಡಿದ್ದಾರೆ.
Recommended Video
ಕಾಂಗ್ರೆಸ್ನ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿ ಸೋಮವಾರ ಮಾಡಿರುವ ಟ್ವೀಟ್ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸಿಂಘ್ವಿ, ಸಾವರ್ಕರ್ ಅವರನ್ನು ಪರಿಪೂರ್ಣ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ. ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದು ಸಾವರ್ಕರ್; ವಿವಾದದ ಕಿಡಿ ಎಬ್ಬಿಸಿದ ಸಿದ್ದರಾಮಯ್ಯ
ಸಾವರ್ಕರ್ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬ್ರಿಟಿಷರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಅಲ್ಲದೆ ಮಹಾತ್ಮ ಗಾಂಧಿ ಹತ್ಯೆಯಲ್ಲಿ ಪ್ರಮುಖ ಸಂಚುಕೋರರಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಸಾವರ್ಕರ್ ಅವರ ಕುರಿತು ಸತತ ವಾಗ್ದಾಳಿಗಳನ್ನು ನಡೆಸಿರುವ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಅವರಿಗೆ ಭಾರತ ರತ್ನ ಕೊಡುವ ಪ್ರಸ್ತಾಪವನ್ನು ಆಕ್ಷೇಪಿಸಿತ್ತು. ಆದರೆ ಅಭಿಷೇಕ್ ಮನು ಸಿಂಘ್ವಿ ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವುದು ಕಾಂಗ್ರೆಸ್ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಾವರ್ಕರ್ ಹೋರಾಡಿದ್ದು ಸತ್ಯ
'ವೈಯಕ್ತಿಕವಾಗಿ ನಾನು ಸಾವರ್ಕರ್ ಅವರ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಆದರೆ ಅದು ಅವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ, ದಲಿತರ ಹಕ್ಕುಗಳ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ದೇಶಕ್ಕಾಗಿ ಜೈಲು ಸೇರಿದ್ದ ಪರಿಪೂರ್ಣ ವ್ಯಕ್ತಿ ಎಂಬ ಸತ್ಯವನ್ನು ದೂರಮಾಡುವುದಿಲ್ಲ' ಎಂಬುದಾಗಿ ರಾಜ್ಯಸಭಾ ಸದಸ್ಯರಾಗಿರುವ ಸಿಂಘ್ವಿ ಟ್ವೀಟ್ ಮಾಡಿದ್ದಾರೆ.
ಸಾವರ್ಕರ್ ವಿರೋಧಿಯಲ್ಲ-ಸಿಂಗ್
ಮುಂಬೈನಲ್ಲಿ ಕಳೆದ ವಾರ ಸುದ್ದಿಗೋಷ್ಠಿ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ 'ನಾವು ಸಾವರ್ಕರ್ ವಿರೋಧಿಯಲ್ಲ. ಆದರೆ ಅವರ ಹಿಂದುತ್ವ ಸಿದ್ಧಾಂತದ ಬಗ್ಗೆ ಸಹಮತವಿಲ್ಲ ಎಂದಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಆಡಳಿತಾವಧಿಯಲ್ಲಿ ಸಾವರ್ಕರ್ ಹೆಸರಿನಲ್ಲಿ ಅಂಚೆಚೀಟಿ ಕೂಡ ಹೊರತಂದಿದ್ದರು ಎಂದು ಸಿಂಗ್ ನೆನಪಿಸಿಕೊಂಡಿದ್ದರು.
'ನಾವು ಸಾವರ್ಕರ್ ವಿರೋಧಿಯಲ್ಲ, ಆದರೆ...' ಮೌನ ಮುರಿದ ಮನಮೋಹನ್ ಸಿಂಗ್
'ಗೋಡ್ಸೆಗೂ ಭಾರತ ರತ್ನ ಕೊಡಿ'
ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ವೀರ್ ಸಾವರ್ಕರ್ ಒಬ್ಬರು. ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ಸೂಕ್ತ ಸಾಕ್ಷ್ಯ ಇಲ್ಲದ ಕಾರಣ ಆರೋಪಿಯಾಗಿ ಗುರುತಿಸಿರಲಿಲ್ಲ. ಸಾವರ್ಕರ್ ಅವರಂತಹ ವ್ಯಕ್ತಿಗೂ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಸಾವರ್ಕರ್ಗೆ ಭಾರತ ರತ್ನ
ಮಹಾರಾಷ್ಟ್ರದಲ್ಲಿ ಸೋಮವಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕಳೆದ ವಾರ ಬಿಜೆಪಿ ತನ್ನ ಪ್ರಣಾಳಿಕೆ ಪ್ರಕಟಿಸಿತ್ತು. ಅದರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಬೆಂಬಲಿಗರು ಈ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದರು.
ಕ್ರಿಮಿನಲ್ ಕೇಸ್ ಇರುವ ಸಾವರ್ಕರ್ ಗೆ ಭಾರತ ರತ್ನ: 'ಗಾಡ್ ಸೇವ್ ದಿಸ್ ಕಂಟ್ರಿ'