ಪಾಕಿಸ್ತಾನದ ಮುಸ್ಲಿಂಗೆ ಪದ್ಮಶ್ರೀ ಕೊಡುವುದಾದರೆ ಸಿಎಎ ತಂದಿದ್ದೇಕೆ?: ಕಾಂಗ್ರೆಸ್ ವಾಗ್ದಾಳಿ
ನವದೆಹಲಿ, ಜನವರಿ 27: ಪಾಕಿಸ್ತಾನ ಮೂಲಕ ಅದ್ನಾನ್ ಸಾಮಿ ಭಾರತದ ಪೌರತ್ವ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆಯುವುದಾದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವ ಅಗತ್ಯವೇನಿದೆ? ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷ ಮೂಡಿಸುವ ಸಲುವಾಗಿಯೇ ಈ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.
25,000 ಅನಾಥ ಶವಗಳ ಅಂತ್ಯಸಂಸ್ಕಾರದ ಗುಟ್ಟು ಬಿಚ್ಚಿಟ್ಟ ಶರೀಫ್ ಚಾಚಾ
'ಅದ್ನಾನ್ ಸಾಮಿಗೆ ಪೌರತ್ವ ನೀಡಲು ಶಿಫಾರಸು ಮಾಡಿದಾಗ ನನ್ನನ್ನು ಟೀಕಿಸಲಾಗಿತ್ತು. ಅವರಿಗೆ ಪೌರತ್ವ ಮತ್ತು ಪದ್ಮಶ್ರೀ ಎರಡೂ ದೊರಕಿದ್ದಕ್ಕೆ ನನಗೆ ಸಂತೋಷವಿದೆ. ಪಾಕಿಸ್ತಾನದ ಒಬ್ಬ ಮುಸ್ಲಿಮನಿಗೆ ಸರ್ಕಾರ ಪೌರತ್ವ ನೀಡಬಹುದಾದರೆ ಸಿಎಎ ಜಾರಿಗೊಳಿಸುವ ಅಗತ್ಯವೇನಿದೆ? ಇದನ್ನು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ತಿಕ್ಕಾಟ ಸೃಷ್ಟಿಸಲೆಂದೇ ತರಲಾಗಿದೆ' ಎಂದು ಅವರು ಹೇಳಿದ್ದಾರೆ.
ವಿದೇಶಿಗ ಎಂದು ಘೋಷಿಸಿದ್ದೇಕೆ?
ಅದ್ನಾನ್ ಸಾಮಿ ಅವರಿಗೆ ಪದ್ಮಶ್ರೀ ನೀಡಿರುವುದಕ್ಕೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್, ಪಾಕಿಸ್ತಾನದ ವಾಯುಪಡೆಯ ಪೈಲಟ್ನ ಮಗನಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದರ ಗೌರವ ಸಿಗುವುದಾದರೆ ಕಾರ್ಗಿಲ್ ಯುದ್ಧದ ಹಿರಿಯ ಯೋಧ ಮೊಹಮ್ಮದ್ ಸನಾವುಲ್ಲಾ ಅವರನ್ನು ಅಸ್ಸಾಂನಲ್ಲಿ ಎನ್ಆರ್ಸಿ ಮೂಲಕ ವಿದೇಶಿಗ ಎಂದು ಘೋಷಿಸಿರುವುದು ಹೇಗೆ? ಎಂದು ಕಿಡಿಕಾರಿದ್ದಾರೆ.
ಭಾರತದ ವಿರುದ್ಧ ಹೋರಾಡಿದವರು
'ದೇಶಕ್ಕಾಗಿ ಹೋರಾಡಿದ ಕಾರ್ಗಿಲ್ ಯುದ್ಧದ ಹಿರಿಯ ಯೋಧ ಮತ್ತು ನಿವೃತ್ತ ಸೇನಾಧಿಕಾರಿ ಮೊಹಮ್ಮದ್ ಸನಾವುಲ್ಲಾ ಅವರನ್ನು ಎನ್ಆರ್ಸಿ ಬಳಿಕ ವಿದೇಶಿಗ ಎಂದು ಘೋಷಿಸಿದ್ದಾರೆ. ಆದರೆ ಭಾರತದ ವಿರುದ್ಧ ಹೋರಾಡಿದ ಕುಟುಂಬದ ಅದ್ನಾನ್ ಸಾಮಿಗೆ ಪದ್ಮಶ್ರೀ ನೀಡಲಾಗಿದೆ. ಇದು ಎನ್ಆರ್ಸಿ ಮತ್ತು ಸರ್ಕಾರದ ಚಮಚಾಗಿರಿಯ ಮ್ಯಾಜಿಕ್' ಎಂದು ಅವರು ಟೀಕಿಸಿದ್ದಾರೆ.
ಭಾರತದ ಏಕೈಕ ಸಂಸ್ಕೃತ ಪತ್ರಿಕೆಗೆ ಹುಡುಕಿಕೊಂಡು ಬಂತು ಪದ್ಮಶ್ರೀ ಗೌರವ
ನಾಲ್ಕು ವರ್ಷದ ಹಿಂದೆ ಪೌರತ್ವ
ಪಾಕಿಸ್ತಾನದ ವಾಯುಪಡೆಯ ಪೈಲಟ್ ಮಗನಾಗಿರುವ ಅದ್ನಾನ್ ಸಾಮಿ, ಲಂಡನ್ನಲ್ಲಿ ಜನಿಸಿದ್ದರು. 2015ರಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದ ಅವರಿಗೆ 2016ರ ಜನವರಿಯಲ್ಲಿ ಭಾರತದ ಪೌರತ್ವ ನೀಡಲಾಗಿತ್ತು. ಶನಿವಾರ ಘೋಷಣೆಯಾದ ಪದ್ಮಶ್ರೀ ಪುರಸ್ಕೃತರ ಪಟ್ಟಿಯಲ್ಲಿನ 118 ಜನರಲ್ಲಿ ಸಾಮಿ ಕೂಡ ಒಬ್ಬರು. ಅವರ ಮಾತೃ ರಾಜ್ಯವನ್ನು ಮಹಾರಾಷ್ಟ್ರ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನಿರ್ಧಾರ ವಾಪಸ್ ಪಡೆಯಿರಿ
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಅದ್ನಾನ್ ಸಾಮಿಗೆ ಪದ್ಮಶ್ರೀ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಸಿಎಎ ಪರ ಅಭಿಯಾನ ಕೈಗೊಳ್ಳಲು ಮುಂದಾಗಿದ್ದ ರಾಜ್ ಠಾಕ್ರೆ, ಅದ್ನಾನ್ ಸಾಮಿ ಭಾರತದ ಮೂಲ ಪ್ರಜೆಯಲ್ಲ ಎಂದು ಹೇಳಿದ್ದಾರೆ. ಎಂಎನ್ಎಸ್ ದೃಷ್ಟಿಯಲ್ಲಿ ಸಾಮಿಗೆ ಯಾವುದೇ ಪ್ರಶಸ್ತಿಗಳನ್ನು ನೀಡಬಾರದು. ಅವರಿಗೆ ಪದ್ಮಶ್ರೀ ಗೌರವ ನೀಡಿದ್ದನ್ನು ನಾವು ಖಂಡಿಸುತ್ತೇವೆ. ಈ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.