ನಿಜವಾದ ಅಪಾಯ ಮುಂದಿದೆ: ವಿದಾಯದ ಪತ್ರದಲ್ಲಿ ರಾಹುಲ್ ಗಾಂಧಿ ಕಳವಳ
ನವದೆಹಲಿ, ಜುಲೈ 3: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿದಿರುವ ರಾಹುಲ್ ಗಾಂಧಿ ಪಕ್ಷವನ್ನು ಹೊಸದಾಗಿ ಸಂಘಟಿಸುವ ಹುಮ್ಮಸ್ಸು ವ್ಯಕ್ತಪಡಿಸಿದ್ದಾರೆ. ತಮ್ಮ ಸ್ಥಾನಕ್ಕೆ ಸೂಕ್ತ ಸಾರಥಿಯನ್ನು ಆಯ್ಕೆ ಮಾಡುವ ವಿಶ್ವಾಸವನ್ನು ಹಂಚಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿನ ಸೋಲಿಗೆ ಹೊಣೆ ಹೊತ್ತು ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಪಕ್ಷ ಇನ್ನೂ ಅಂಗೀಕರಿಸಿಲ್ಲ. ಆದರೆ, ಅದನ್ನು ಒಪ್ಪಿಕೊಳ್ಳಲೇಬೇಕು ಎಂಬ ಹಠ ಹಿಡಿದಿರುವ ರಾಹುಲ್ ಗಾಂಧಿ, ಅಧಿಕೃತವಾಗಿ ಒಂದು ಹೆಜ್ಜೆ ಹೊರಕ್ಕೆ ಇರಿಸಿದ್ದಾರೆ.
ಅದಕ್ಕೆ ಸಾಕ್ಷಿ ಎಂಬಂತೆ ಪಕ್ಷದ ಅಧ್ಯಕ್ಷಗಿರಿಯಿಂದ ಹೊರ ಹೋಗುತ್ತಿರುವ ವಿದಾಯದ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಲೋಕಸಭೆ ಚುನಾವಣೆಯ ಸೋಲು, ಪಕ್ಷದ ಮರುಸಂಘಟನೆ, ಬಿಜೆಪಿ-ಆರೆಸ್ಸೆಸ್ ಅಧಿಕಾರದಲ್ಲಿ ಎದುರಾಗಲಿರುವ ಭವಿಷ್ಯದ ಅಪಾಯ ಮುಂತಾದವುಗಳ ಕುರಿತು ನಾಲ್ಕು ಪುಟಗಳ ಸುದೀರ್ಘ ಪತ್ರವನ್ನು ಬರೆದು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ತಡಮಾಡದೆ ಹೊಸ ಅಧ್ಯಕ್ಷರನ್ನು ಆರಿಸಿ: ನಾಯಕರಿಗೆ ರಾಹುಲ್ ಗಾಂಧಿ ಆದೇಶ
ತಮ್ಮ ಟ್ವಿಟ್ಟರ್ ಖಾತೆಯಲ್ಲಿನ 'ಕಾಂಗ್ರೆಸ್ ಅಧ್ಯಕ್ಷ' ಎಂಬ ಹುದ್ದೆ ಸೂಚಕವನ್ನು ಅವರು ತೆಗೆದು ಹಾಕಿರುವುದು ಅವರು ಅಧ್ಯಕ್ಷ ಸ್ಥಾನದಿಂದ ಇಳಿದಿರುವುದನ್ನು ಅಧಿಕೃತವಾಗಿ ತಿಳಿಸಿದೆ. ಅದಕ್ಕೆ ಪೂರಕವಾಗಿರುವ ಪತ್ರ ಕೂಡ ರಾಹುಲ್ ನಡೆಯನ್ನು ಸಾರುತ್ತಿದೆ.
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಸಾಮಾನ್ಯ ಐಎನ್ಸಿ ಸದಸ್ಯರಾಗಿರುವ ರಾಹುಲ್ ಗಾಂಧಿ ಅವರ ಪತ್ರದಲ್ಲಿ ಏನಿದೆ? ಮುಂದೆ ಓದಿ...
ಹೊಣೆಗಾರಿಕೆ ಹೊರುವುದು ಕರ್ತವ್ಯ
ಕಾಂಗ್ರೆಸ್ನ ಅಧ್ಯಕ್ಷನಾಗಿದ್ದು ತಮಗೆ ದೊರೆತ ಗೌರವ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ 2019ರ ಲೋಕಸಭೆ ಚುನಾವಣೆಯ ಸೋಲಿಗೆ ನಾನೇ ಹೊಣೆಗಾರನಾಗಿದ್ದೇನೆ. ಪಕ್ಷದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಈ ರಿತಿ ಹೊಣೆಗಾರಿಕೆ ಹೊರುವುದು ಮುಖ್ಯವಾದ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷವನ್ನು ಮತ್ತೆ ಕಟ್ಟಲು ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅತಿ ಅಗತ್ಯ. ಈ ಚುನಾವಣೆಯ ವೈಫಲ್ಯಕ್ಕೆ ಅನೇಕರು ಹೊಣೆಗಾರರಾಗುತ್ತಾರೆ. ಅವರಿಗೆ ಸೋಲಿನ ಹೊಣೆ ಹೊರಿಸಿ ಪಕ್ಷದ ಅಧ್ಯಕ್ಷನಾಗಿ ಸೋಲಿಗೆ ನನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ನ್ಯಾಯೋಚಿತವಾಗುವುದಿಲ್ಲ ಎಂದು ಅವರು ಬರೆದಿದ್ದಾರೆ.
ರಾಹುಲ್ ರಾಜೀನಾಮೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಆತ್ಮಹತ್ಯೆ ಯತ್ನ
ಪಕ್ಷದ ಪರಂಪರೆ ಗೌರವಿಸಬೇಕು
ಮುಂದಿನ ಅಧ್ಯಕ್ಷರನ್ನು ನೀವೇ ನೇಮಿಸಿ ಎಂದು ಅನೇಕರು ಸಲಹೆ ನೀಡಿದ್ದಾರೆ. ಆದರೆ, ಅದು ಸರಿಯಲ್ಲ. ಪಕ್ಷಕ್ಕೆ ಸುದೀರ್ಘ ಇತಿಹಾಸ ಮತ್ತು ಪರಂಪರೆಯಿದೆ. ಅದನ್ನು ಗೌರವಿಸಬೇಕು. ನಮ್ಮನ್ನು ಧೈರ್ಯ, ಪ್ರೀತಿ ಮತ್ತು ದಕ್ಷತೆಯಿಂದ ಮುನ್ನಡೆಸಬಲ್ಲ ಸೂಕ್ತ ನಾಯಕನನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ನನ್ನ ರಾಜೀನಾಮೆ ನೀಡಿದ ಕೂಡಲೇ ಹೊಸ ಅಧ್ಯಕ್ಷರ ನೇಮಕಕ್ಕೆ ಹುಡುಕಾಟ ನಡೆಸುವಂತೆ ಪಕ್ಷದ ಕಾರ್ಯಕಾರಿ ಸಮಿತಿಗೆ ಸಲಹೆ ನೀಡಿದ್ದೆ. ಇದರ ಸುಗಮ ಪ್ರಕ್ರಿಯೆಗೆ ನನ್ನ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದು ಅಧಿಕೃತ! ರಾಹುಲ್ ಗಾಂಧಿ ಇನ್ನು ಕಾಂಗ್ರೆಸ್ ಅಧ್ಯಕ್ಷರಲ್ಲ!
ಬಿಜೆಪಿ ಮೇಲೆ ದ್ವೇಷ, ಸಿಟ್ಟು ಇಲ್ಲ
ನನ್ನ ಹೋರಾಟ ರಾಜಕೀಯ ಅಧಿಕಾರಕ್ಕಾಗಿ ನಡೆದ ಸಾಮಾನ್ಯ ಹೋರಾಟವಾಗಿರಲಿಲ್ಲ. ಬಿಜೆಪಿ ವಿರುದ್ಧ ನನ್ನಲ್ಲಿ ಯಾವ ದ್ವೇಷ ಅಥವಾ ಸಿಟ್ಟು ಇಲ್ಲ. ಆದರೆ, ಅವರ ಯೋಜನೆಯ ಭಾರತವನ್ನು ನನ್ನ ದೇಹದ ಕಣಕಣವೂ ಪ್ರತಿರೋಧಿಸುತ್ತದೆ. ಇದು ಹೊಸ ಯುದ್ಧವೇನೂ ಅಲ್ಲ. ನಮ್ಮ ಮಣ್ಣಿನಲ್ಲಿ ಸಾವಿರಾರು ವರ್ಷಗಳಿಂದ ನಡೆದುಬಂದಿರುವ ಕದನ. ಆದರೆ ಯಾವ ಬದಲಾವಣೆಯಾಗಿದೆ? ನನಗೆ ಹೋಲಿಕೆಗಳು ಕಾಣಿಸುತ್ತಿವೆ. ಅವರು ದ್ವೇಷ ಕಂಡಲ್ಲಿ ನಾನು ಪ್ರೀತಿ ಕಾಣುತ್ತೇನೆ. ಅವರು ಭಯಪಟ್ಟುಕೊಂಡದ್ದನ್ನು ನಾನು ಅಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ಭಾರತವನ್ನು ನಾನು ಪ್ರೀತಿಸುತ್ತೇನೆ
ನಾವು ಚುನಾವಣೆಯಲ್ಲಿ ಬಲವಾಗಿ ಮತ್ತು ಘನತೆಯಿಂದ ಹೋರಾಡಿದ್ದೇವೆ. ನಮ್ಮ ಪ್ರಚಾರವು ಸಹೋದರತೆ, ಸಹಿಷ್ಣುತೆ ಮತ್ತು ದೇಶದ ಎಲ್ಲ ಜನರಿಗೆ, ಧರ್ಮಗಳಿಗೆ ಹಾಗೂ ಸಮುದಾಯಗಳಿಗೆ ಗೌರವವನ್ನು ನೀಡುವುದಾಗಿತ್ತು. ನಾನು ವೈಯಕ್ತಿಕವಾಗಿ ಪ್ರಧಾನಿ, ಅರೆಸ್ಸೆಸ್ ಮತ್ತು ಅವರು ಹಿಡಿದಿಟ್ಟುಕೊಂಡಿರುವ ಸಂಸ್ಥೆಗಳ ಕುರಿತು ಹೋರಾಟ ನಡೆಸಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ. ಅದಕ್ಕಾಗಿ ಹೋರಾಟ ಮಾಡಿದೆ. ಭಾರತವನ್ನು ನಿರ್ಮಿಸಿದ ಮಾದರಿಗಳನ್ನು ಸಮರ್ಥಿಸಿಕೊಳ್ಳಲು ಹೋರಾಡಿದೆ ಎಂದು ಬರೆದಿದ್ದಾರೆ.
ಆಡಳಿತ ಯಂತ್ರದ ವಿರುದ್ಧ ಹೋರಾಟ
2019ರ ಚುನಾವಣೆಯಲ್ಲಿ ನಾವು ರಾಜಕೀಯ ಪಕ್ಷವಾಗಿ ಹೋರಾಡಲಿಲ್ಲ. ಬದಲಾಗಿ ನಾವು ದೇಶದ ಇಡೀ ಆಡಳಿತ ಯಂತ್ರದ, ವಿರೋಧಿಗಳನ್ನು ಹಣಿಯಲು ಬಳಸಿಕೊಂಡ ಸಂಸ್ಥೆಗಳ ವಿರುದ್ಧ ಹೋರಾಡಿದೆವು. ನಮ್ಮನ್ನು ಒಂದು ಕಾಲದಲ್ಲಿ ಉನ್ನತಿಗೆ ಕೊಂಡೊಯ್ದ ಸಂಸ್ಥೆಗಳು ಈಗ ಅಸ್ತಿತ್ವದಲ್ಲಿ ಇಲ್ಲ ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ ಎಂದು ಹೇಳಿದ್ದಾರೆ.
ಆರೆಸ್ಸೆಸ್ನಿಂದ ಭವಿಷ್ಯದಲ್ಲಿ ಅಪಾಯ
ಈ ದೇಶದ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಆರೆಸ್ಸೆಸ್ನ ಉದ್ದೇಶ ಈಗ ಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ಮೂಲಭೂತವಾಗಿ ದುರ್ಬಲವಾಗಿದೆ. ಈಗಿನಿಂದ ನಿಜವಾದ ಅಪಾಯ ಎದುರಾಗಲಿದೆ. ಭಾರತದ ಭವಿಷ್ಯದಲ್ಲಿ ಚುನಾವಣೆಗಳು ಮಾಯವಾಗಲಿದ್ದು, ಕೇವಲ ಆಚರಣೆಯಾಗಿ ಉಳಿಯಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ಅಧಿಕಾರವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಭಾರತದಲ್ಲಿ ಊಹಿಸಲು ಅಸಾಧ್ಯವಾದ ಮಟ್ಟದ ಹಿಂಸಾಚಾರ ಮತ್ತು ನೋವಿಗೆ ಎಡೆಮಾಡಿಕೊಡಲಿದೆ. ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು, ಬುಡಕಟ್ಟುಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಅತಿ ಹೆಚ್ಚು ಸಂಕಷ್ಟ ಅನುಭವಿಸಲಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದ ಆರ್ಥಿಕತೆ ಮತ್ತು ಪ್ರತಿಷ್ಠೆ ನಾಶವಾಗಲಿದೆ. ಪ್ರಧಾನಿ ಅವರ ಗೆಲುವು ಅವರ ವಿರುದ್ಧದ ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಿದಂತೆ ಅಲ್ಲ. ಯಾವುದೇ ಹಣ ಅಥವಾ ಪಿತೂರಿಯು ಸತ್ಯದ ಬೆಳಕನ್ನು ಮುಚ್ಚಿಹಾಕಲಾರದು ಎಂದಿದ್ದಾರೆ.
ಬಿಜೆಪಿ ಧ್ವನಿಗಳನ್ನು ಅಡಗಿಸುತ್ತಿದೆ
ಭಾರತವು ನಮ್ಮ ಸಂಸ್ಥೆಗಳನ್ನು ಮತ್ತೆ ಮರಳಿ ಪಡೆದುಕೊಳ್ಳಬೇಕು. ಇದಕ್ಕೆ ಇರುವ ಮಾರ್ಗ ಕಾಂಗ್ರೆಸ್ ಪಕ್ಷದ ಪುನರುಜ್ಜೀವನ. ಈ ಮಹತ್ವದ ಗುರಿಯನ್ನು ತಲುಪಲು ಕಾಂಗ್ರೆಸ್ ಪಕ್ಷವನ್ನು ಭಾರಿ ಪ್ರಮಾಣದಲ್ಲಿ ತನ್ನನ್ನು ತಾನು ಪರಿವರ್ತಿಸಿಕೊಳ್ಳಬೇಕು. ಇಂದು ಬಿಜೆಪಿ ಭಾರತೀಯರ ಧ್ವನಿಯನ್ನು ವ್ಯವಸ್ಥಿತವಾಗಿ ಅಡಗಿಸುತ್ತಿದೆ. ಈ ಧ್ವನಿಗಳನ್ನು ಉಳಿಸುವುದು ಕಾಂಗ್ರೆಸ್ನ ಕರ್ತವ್ಯ. ಭಾರತವು ಹಿಂದೆಂದೂ ಮತ್ತು ಮುಂದೆಯೂ ಒಂದೇ ಧ್ವನಿಯಾಗಿ ಉಳಿಯಲಾರದು. ಇದು ಯಾವಾಗಲೂ ಬಹುಧ್ವನಿಗಳ ಮಿಶ್ರಣವಾಗಿರುತ್ತದೆ. ಇದೇ ಭಾರತ ಮಾತೆಯ ನೈಜ ಸತ್ವ ಎಂದು ರಾಹುಲ್ ಬರೆದಿದ್ದಾರೆ.