ರಾಹುಲ್ ರಾಜೀನಾಮೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಆತ್ಮಹತ್ಯೆ ಯತ್ನ
ನವದೆಹಲಿ, ಜುಲೈ 2: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಪಕ್ಷದ ಕಾರ್ಯಕರ್ತ, ದೆಹಲಿಯಲ್ಲಿನ ಪಕ್ಷದ ಮುಖ್ಯ ಕಚೇರಿ ಹೊರಗೆ ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಹನೀಫ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಪಕ್ಷದ ಕಾರ್ಯಕರ್ತ.
ಲೋಕಸಭೆ ಚುನಾವಣೆ ಸೋಲು: ಕಾಂಗ್ರೆಸ್ ಪದಾಧಿಕಾರಿಗಳಿಂದ ಸಾಮೂಹಿಕ ರಾಜೀನಾಮೆ
ಕೈಯಲ್ಲಿ ಹಗ್ಗ ಹಿಡಿದುಕೊಂಡು ಮರ ಏರಿದ್ದರು ಹನೀಫ್. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಸೇರಿ, ಆತನನ್ನು ಆ ಸ್ಥಳದಿಂದ ಕರೆದೊಯ್ದಿದ್ದಾರೆ. ಅದಕ್ಕೂ ಮುನ್ನ, ಪಕ್ಷದ ವಿವಿಧ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದ ನೂರಾರು ಕಾರ್ಯಕರ್ತರು ಕಚೇರಿ ಮುಂಭಾಗ ಸೇರಿ, ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು.
ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳ ಎಲ್ಲ ಐವರು ಮುಖ್ಯಮಂತ್ರಿಗಳು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿ, ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವಂತೆ ಮನವಿ ಮಾಡಿದ್ದರು. ಅದಾದ ಮರು ದಿನ ಈ ಧರಣಿ ನಡೆಯುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡ ನಂತರ ಮೇ ಇಪ್ಪತ್ತೈದರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಆ ನಿರ್ಧಾರವನ್ನು ಸಮಿತಿಯು ತಿರಸ್ಕರಿಸಿತ್ತು.