ಸಂಸತ್ತು ಅಧಿವೇಶನದಲ್ಲಿ ಈ ವಿಚಾರಗಳನ್ನು ಎತ್ತಲಿದೆ ಕಾಂಗ್ರೆಸ್
ನವದೆಹಲಿ, ನವೆಂಬರ್ 25: ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 29 ರಂದು ಆರಂಭ ಆಗಲಿದೆ. ಈ ನಿಟ್ಟಿನಲ್ಲಿ ಗುರುವಾರ ಸಂಜೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಸಂಸತ್ ಕಾರ್ಯತಂತ್ರ ಗುಂಪು ಸಭೆ ನಡೆದಿದೆ.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎ.ಕೆ.ಆಂಟನಿ, ಆನಂದ್ ಶರ್ಮಾ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಕೆ.ಸಿ.ವೇಣುಗೋಪಾಲ್, ಕೆ.ಸುರೇಶ್, ರವನೀತ್ ಬಿಟ್ಟು, ಜೈರಾಮ್ ರಮೇಶ್ ಉಪಸ್ಥಿತರಿದ್ದರು. ಈ ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, "ಈ ಸಭೆಯಲ್ಲಿ ಬಹು ಪ್ರಮುಖ ವಿಷಯವನ್ನು ಚರ್ಚೆ ಮಾಡಲಾಗಿದೆ," ಎಂದು ತಿಳಿಸಿದ್ದಾರೆ.
ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಸಂಪುಟ ಅನುಮೋದನೆ
"ಕಾಂಗ್ರೆಸ್ ಸಂಸತ್ತು ಸಭೆಯಲ್ಲಿ ಬಹು ಮುಖ್ಯ ವಿಷಯವನ್ನು ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ನಾವು ಎಲ್ಲಾ ರೂಪದಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸುವ ಪ್ರಯತ್ನವನ್ನು ಮಾಡುತ್ತೇವೆ. ನಾವು ಎಲ್ಲಾ ಪ್ರಮುಖ ವಿಷಯಗಳನ್ನು ಎಲ್ಲಾ ವಿರೋಧ ಪಕ್ಷಗಳು ಮಾತನಾಡುವಂತೆ ನೋಡಿಕೊಳ್ಳುತ್ತೇವೆ," ಎಂದು ಕೂಡಾ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಹೇಳಿದರು.
ಕಾಂಗ್ರೆಸ್ ಸಂಸತ್ತಿನಲ್ಲಿ ಯಾವ ವಿಷಯಗಳನ್ನು ಎತ್ತಲಿದೆ?
"ರೈತರ ಬೇಡಿಕೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವಿಚಾರವನ್ನು ನಾವು ಅಧಿವೇಶನದಲ್ಲಿ ಎತ್ತಲಿದ್ದೇವೆ. ಹಾಗೆಯೇ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರ ಸಾವಿನ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನು ಆರೋಪಿಯಾದ ಕಾರಣ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನು ನಾವು ಅಧಿವೇಶನದಲ್ಲಿ ಮಾಡಲಿದ್ದೇವೆ. ಅದಲ್ಲದೇ ಬೆಲೆ ಏರಿಕೆ ಆಗುತ್ತಿರುವ ಬಗ್ಗೆ ಮಾತನಾಡಲಿದ್ದೇವೆ," ಎಂದು ತಿಳಿಸಿದರು.
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧಿಸುವುದರ ಬದಲಿಗೆ ನಿಯಂತ್ರಣಕ್ಕೆ ಮಸೂದೆ
ಇನ್ನು ಈ ಬಗ್ಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, "ನಾವು ಹಲವಾರು ವಿಷಯಗಳನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ. ಹಣದುಬ್ಬರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ, ಚೀನಾದ ಆಕ್ರಮಣ, ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ನಾವು ಎತ್ತಲಿದ್ದೇವೆ," ಎಂದು ಹೇಳಿದರು.
ಮೊದಲ ದಿನ ಯಾವ ವಿಚಾರಕ್ಕೆ ಆದ್ಯತೆ
"ಸಂಸತ್ತಿನ ಚಳಿಗಾಲದ ಅಧಿವೇಶ ನವೆಂಬರ್ 29 ರಂದು ಆರಂಭ ಆಗಲಿದೆ. ಕಾಂಗ್ರೆಸ್ ಪಕ್ಷವು ಮೊದಲ ದಿನದಂದು ರೈತರ ವಿಚಾರವನ್ನು ಎತ್ತಲಿದ್ದೇವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವಿಚಾರ, ಕೇಂದ್ರ ಸಚಿಯ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ವಿಚಾರವನ್ನು ಮುಂದಿಡಲಿದ್ದೇವೆ," ಎಂದು ಕೂಡಾ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದರು. "ಸಂಸತ್ತಿನ ಈ ವಿಷಯವನ್ನು ಚರ್ಚೆ ಮಾಡುವುದಕ್ಕೆ ಹಲವಾರು ವಿರೋಧ ಪಕ್ಷಗಳು ಬೆಂಬಲ ಇದೆ. ಸಂಸತ್ತಿನಲ್ಲಿ ಎಲ್ಲಾ ಪಕ್ಷಗಳು ಜೊತೆಯಾಗುವ ನಿಟ್ಟಿನಲ್ಲಿ ನಾವು ಎಲ್ಲಾ ಪಕ್ಷದ ನಾಯಕರುಗಳನ್ನು ಕರೆದು ಚರ್ಚೆ ನಡೆಸಲಿದ್ದೇವೆ," ಎಂದು ಕೂಡಾ ತಿಳಿಸಿದರು.
ಕಳೆದ ಬಾರಿ ಅಧಿವೇಶನ ನಡೆದ ಸಂದರ್ಭದಲ್ಲಿ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬ ವಿಚಾರದ ಜೊತೆಗೆ ಪೆಗಾಸಸ್ ಹಗಣರದ ಬಗ್ಗೆ ವಿರೋಧ ಪಕ್ಷಗಳು ಧನಿ ಎತ್ತಿದ್ದವು. ಆದರೆ ಈ ಬಾರಿ ಈಗಾಗಲೇ ಕೃಷಿ ಕಾಯ್ದೆಯನ್ನು ರದ್ದು ಮಾಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿರುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ಹಾಗೂ ಬೆಲೆ ಏರಿಕೆಯ ಬಗ್ಗೆ ಅಧಿಕ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೇ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಹಿನ್ನೆಲೆಯಿಂದಾಗಿ ಈ ಸಂಸತ್ತು ಅಧಿವೇಶನವು ಅತೀ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.