ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿನಿಂದ 'ವಿಶ್ವಾಸಘಾತಕ ದಿವಸ'
ನವದೆಹಲಿ, ಮೇ 26: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ 4 ವರ್ಷ ಪೂರೈಸುತ್ತಿರುವ ಹೊತ್ತಲ್ಲಿ ಶನಿವಾರ(ಮೇ 26)ವನ್ನು ವಿಶ್ವಾಸಘಾತ ದಿವಸ್ ಅನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ಸಿನ ಹಿರಿಯ ನಾಯಕರು ರಾಷ್ಟ್ರದ 20 ಕ್ಕೂ ಹೆಚ್ಚು ನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ದೆಹಲಿಯಲ್ಲೂ ಪತ್ರಿಕಾಗೋಷ್ಠಿ ನಡೆಯಲಿದೆ. ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್, ರಾಜದೀಪ್ ಸರ್ಜೇವಾಲಾ ಮುಂತಾದ ನಾಯಕರು ಸುದ್ದಿಗೋಷ್ಠಿ ನಡೆಸಿಕೊಡಲಿದ್ದಾರೆ.
ಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿ
ಆಯಾ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರು ಮತ್ತು ಎಐಸಿಸಿ ಉಸ್ತುವಾರಿಗಳು ಸುದ್ದಿಗೋಷ್ಠಿ ನಡೆಸಿಕೊಡುವ ಮೂಲಕ ಕೇಂದ್ರ ಸರ್ಕಾರದ ಬಗೆಗಿನ ಅಸಮಾಧಾನವನ್ನು ಹೊರಹಾಕಲಿದ್ದಾರೆ. ಇಂಧನ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವ ಕುರಿತೂ ಗೋಷ್ಠಿಯಲ್ಲಿ ಉಲ್ಲೇಖವಾಗುವ ಸಾಧ್ಯತೆ ಇದೆ.
ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನೊಂದಿಗೆ ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್(ಎಎಎಸ್ ಯು), ತೃಣಮೂಲ ಕಾಂಗ್ರೆಸ್(ಟಿಎಂಸಿ), ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ), ಬಿಜು ಜನತಾ ದಳ(ಬಿಜೆಡಿ) ಪಕ್ಷಗಳು ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆ ನಡೆಸಲಿವೆ.