ಅಂಬೇಡ್ಕರ್ ಗೆ ಗೌರವ ಸಲ್ಲಿಸುವ ಒಂದಾದರೂ ಕೆಲಸ ಕಾಂಗ್ರೆಸ್ ಮಾಡಿದೆಯಾ?
ನವದೆಹಲಿ, ಏಪ್ರಿಲ್ 13: ಬಾಬಾ ಸಾಹೇಬ್ ಅಂಬೇಡ್ಕರ್ ಗಾಗಿ ಕಾಂಗ್ರೆಸ್ ನವರು ಮಾಡಿದ ಒಂದು ಕೆಲಸ ಹೇಳಿಬಿಡಲಿ, ನಾನು ಸವಾಲು ಹಾಕ್ತೀನಿ. ಅಂಬೇಡ್ಕರ್ ಗೌರವಾರ್ಥ ಅವರು ಮಾಡಿದ ಒಂದು ಕೆಲಸ ಇದೆಯಾ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ.
ಇತಿಹಾಸದಲ್ಲಿ ದಾಖಲಾಗಿರುವ ಅಂಬೇಡ್ಕರ್ ವಿಚಾರಗಳನ್ನು ತೆಗೆದುಹಾಕುವ ಸಲುವಾಗಿ ಕಾಂಗ್ರೆಸ್ ತನ್ನೆಲ್ಲ ಅಧಿಕಾರವನ್ನು ಬಳಸಿದೆ. ಇದು ಇತಿಹಾಸದ ಕಹಿ ಸತ್ಯ. ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ಅವಮಾನ ಮಾಡುವ ಯಾವ ಸಾಧ್ಯತೆಯನ್ನು ಕಾಂಗ್ರೆಸ್ ಬಿಟ್ಟಿಲ್ಲ ಎಂದು ದೆಹಲಿಯ ಅಂಬೇಡ್ಕರ್ ರಾಷ್ಟ್ರೀಯ ಮೆಮೋರಿಯಲ್ ನಲ್ಲಿ ಅವರು ಹೇಳಿದ್ದಾರೆ.
ಅಂಬೇಡ್ಕರ್ ಜಯಂತ್ಯುತ್ಸವ: ಸಾಮಾಜಿಕ ನ್ಯಾಯ ದಿನ
2015ರಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿರುದ್ಧದ ಕಾನೂನು ಬಲ ಪಡಿಸಿದವರು ನಾವು. ಸ್ವಾತಂತ್ರ್ಯ ನಂತರ ಇಂಥದ್ದೊಂದು ಸರಕಾರ ಬರುತ್ತದೆ ಎಂಬ ಅಂದಾಜು ಅಂಬೇಡ್ಕರ್ ಅವರಿಗೆ ಇರಲಿಲ್ಲ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಹಾಗೂ ಯೋಜನೆಗಳನ್ನು ಕಳೆದ ನಾಲ್ಕು ವರ್ಷದಲ್ಲಿ ನಾವು ಮತ್ತೆ ಆರಂಭಿಸಿದ್ದೇವೆ ಎಂದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸರಕಾರದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಯೋಜನೆಗೆ ಸಂಬಂಧಪಟ್ಟ ಕಡತವನ್ನೇ ಮುಚ್ಚಿಹಾಕಿತ್ತು. ನಮಗೆ ಅಧಿಕಾರ ನಡೆಸುವುದಕ್ಕೆ ಅವಕಾಶ ಸಿಕ್ಕಾಗ ಅವೆಲ್ಲ ಮತ್ತೆ ತೆರೆದು, ಕೆಲಸ ಶುರು ಮಾಡಿದೆವು ಎಂದು ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯಾ ನಂತರ ಹಲವು ಸರಕಾರಗಳು ಬಂದಿವೆ. ಈ ಹಿಂದೆ ಆಗಬೇಕಾಗಿದ್ದೆಲ್ಲ ಈಗ ಆಗುತ್ತಿದೆ, ಅದೂ ದಶಕಗಳ ನಂತರ. ಈ ಸ್ಮಾರಕ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಸಲ್ಲಿಸುವ ಗೌರವ ಎಂದು ಡಾ.ಅಂಬೇಡ್ಕರ್ ರಾಷ್ಟ್ರೀಯ ಮೆಮೋರಿಯಲ್ ನಲ್ಲಿ ಮೋದಿ ಹೇಳಿದ್ದಾರೆ.