ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
ನವದೆಹಲಿ, ಡಿಸೆಂಬರ್ 14: ಕುಂಠಿತಗೊಂಡಿರುವ ಆರ್ಥಿಕ ಅಭಿವೃದ್ಧಿ ಖಂಡಿಸಿ ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಭಾರತ್ ಬಚಾವೋ ಎಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ.
ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, ವೇದಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪಿ.ಚಿದಂಬರಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ತಕ್ತಪಡಿಸಿ, ಭಾರತ್ ಬಚಾವೋ ಎಂದು ಕಹಳೆ ಮೊಳಗಿಸಿದ್ದಾರೆ.
ಐಸಿಯುನಲ್ಲಿ ಡೆಮಾಕ್ರಸಿ
ಭಾರತ್ ಬಚಾವೋ ಪ್ರತಿಭಟನಾ ಸಮಾವೇಶಕ್ಕೆ ಹೋಗುವ ಮುನ್ನ ಟ್ವೀಟ್ ಮಾಡಿರುವ, ರಾಹುಲ್ ಗಾಂಧಿ, "ಭಾರತದ ಪ್ರಜಾಪ್ರಭುತ್ವ ಮೋದಿ ಹಾಗೂ ಅಮಿತ ಷಾ ಅವರಿಂದ ಇಂದು ತುರ್ತು ಚಿಕಿತ್ಸಾ ಘಟಕಕ್ಕೆ (ಐಸಿಯು) ಸೇರಿದೆ. ಜಿಡಿಪಿ ದರ ಕುಸಿದು ಬಿದ್ದರೂ, ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ. ಇಂತಹ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ರಾಷ್ಟ್ರೀಯ ಪೌರತ್ವ ಮಸೂದೆ ತಿದ್ದುಪಡಿ ಮಾಡಲು ಹೊರಟಿದೆ. ಇದನ್ನು ದೇಶದ ಜನ ಒಗ್ಗಟ್ಟಾಗಿ ಖಂಡಿಸಲೇಬೇಕು. ಮೋದಿಯಿಂದ ಭಾರತ ರಕ್ಷಿಸಿ' ಎಂದು ಅವರು ಜನರಿಗೆ ಕರೆ ಕೊಟ್ಟಿದ್ದಾರೆ.
'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದ ರಾಹುಲ್ ಗಾಂಧಿ
ಪ್ರಿಯಾಂಕ ಗಾಂಧಿ ಕಹಳೆ
ಇನ್ನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಭಾರತ್ ಬಚಾವೋ ಸಮಾವೇಶದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ. ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಟುಕಿರುವ ಅವರು, "ಮೋದಿ ಇದ್ದರೆ, ನಿರುದ್ಯೋಗ' ಎಂದು ಹೊಸ ಘೋಷಣೆ ಹೊರಡಿಸಿದ್ದಾರೆ. ಕಳೆದ ಆರು ವರ್ಷದಲ್ಲಿ ಕೆಲಸಕ್ಕೆ ಬಾರದ ಕಾಯ್ದೆ ಕಾನೂನುಗಳನ್ನು ಮಾಡಿಕೊಂಡು, ದೇಶದ ಜನರ ಗಮನ ಬೇರೆಡೆ ಸೆಳೆದು ತಮ್ಮ ಅಜೆಂಡಾವವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಪೌರತ್ವ ಮಸೂದೆ ತಿದ್ದುಪಡಿಯಿಂದ ಈಶಾನ್ಯ ಭಾರತದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಆದರೂ ಕೇಂದ್ರ ಕೈ ಕಟ್ಟಿ ಕುಳಿತಿದೆ. ಅತ್ಯಾಚಾರ, ಮಹಿಳಾ ದೌರ್ಜನ್ಯ ಹೆಚ್ಚಾದರೂ ಕಾಳಜಿ ಇಲ್ಲ ಎಂದು ಮಾತನಾಡಿದ್ದಾರೆ.
ದಿನಕ್ಕೊಂದು ಕೆಟ್ಟ ಸುದ್ದಿ; ಪಿ.ಚಿದಂಬರ
ಭಾರತ ಬಚಾವೋ ಸಮಾವೇಶದ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, ಮೋದಿ ಕೆಟ್ಟ ಆರ್ಥಿಕ ನೀತಿ ಹಾಗೂ ಆರ್ಥಿಕ ಬೇಜವಾಬ್ದಾರಿಯಿಂದ ಇಂದು ದಿನ ಬೆಳಗಾದರೆ ಕೆಟ್ಟ ಸುದ್ದಿ ಕೇಳಬೇಕಾಗಿದೆ. ಆರು ತಿಂಗಳಲ್ಲಿ ದೇಶದ ಅರ್ಥವ್ಯವಸ್ಥೆಯನ್ನು ಎನ್ ಡಿ ಎ ಸರ್ಕಾರ ಸಂಪೂರ್ಣ ಹಾಳುಗೆಡವಿದೆ. ಅರ್ಥ ಸಚಿವರಂತೂ ಆಲ್ ಇಸ್ ವೆಲ್, ನಾವೇ ಜಗತ್ತಿನಲ್ಲಿ ನಂಬರ್ 1 ಎಂದು ಹೇಳುತ್ತಾ ಮೈ ಮರೆತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?
ಭಾರತ ಬಚಾವೋ
ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಭಾರತ ಬಚಾವೋ ಸಮಾವೇಶ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಜನ ಸಂಘಟನೆ ಮಾಡುವ ಮುನ್ಸೂಚನೆ ಕೊಟ್ಟಿದೆ. ಸಭೆಯಲ್ಲಿ ಭಾಗವಹಿಸಿರವ ಸೋನಿಯಾ ಗಾಂಧಿ ಕೂಡ ಮಾತನಾಡಲಿದ್ದಾರೆ. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಕಾಂಗ್ರೆಸ ಆಯೋಜಿಸಿರುವ ಅತಿದೊಡ್ಡ ಪ್ರತಿಭಟನಾ ಸಮಾವೇಶ ಇದಾಗಿದೆ.