ರಾಹುಲ್ ಗಾಂಧಿ ಹೇಳಿಕೆ: ಕಾಂಗ್ರೆಸ್ ನಾಯಕರು ಕಂಗಾಲು!
ಬೆಂಗಳೂರು, ಆ. 24: ನಾಯಕತ್ವ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಇಟ್ಟುಕೊಂಡು ಆರಂಭವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಲವು ಹೈಡ್ರಾಮಾಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಬಿಜೆಪಿ ಕುಮ್ಮಕ್ಕು ಕಾರಣ. ಭಿನ್ನಮತೀಯ ಸದಸ್ಯರು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಮಾಡಿದ್ದಾರೆ ಎನ್ನಲಾದ ಗಂಭೀರ ಆರೋಪಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ ನಾನು ಹಾಗೆ ಮಾತನಾಡಿಯೇ ಇಲ್ಲ ಎನ್ನುಮ ಮೂಲಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಹಂತದ ಗೊಂದಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ. ಆದರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮುಂದುವರೆದಿದೆ. ಹೈಕಮಾಂಡ್ಗೆ ಅತ್ಯಾಪ್ತ ನಾಯಕರು ರಾಜೀನಾಮೆ ಮಾತುಗಳನ್ನು ಆಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ. ಇದೀಗ ರಾಹುಲ್ ಗಾಂಧಿ ಅವರು ತಾವು ಹಾಗೆ ಮಾತನಾಡಿಯೇ ಇಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಇನ್ನೂ ಗರಂ ಆಗಿಯೇ ಇದ್ದಾರೆ.
ಜೀವನದಲ್ಲಿ ಒಂದು ಬಾರಿಯೂ
ನಾವು ಬಿಜೆಪಿ ಜತೆ ಕೈ ಜೋಡಿಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದ ಹೈಕೋರ್ಟ್ನಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೆ. ಮಣಿಪುರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷವನ್ನು ಸಮರ್ಥಿಸಿಕೊಂಡಿದ್ದೆ. ಕಳೆದ 30 ವರ್ಷಗಳಲ್ಲಿ ಒಂದೇ ಒಂದು ಬಾರಿಯೂ ಬಿಜೆಪಿ ಪರ ಹೇಳಿಕೆ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.
ಪಕ್ಷಕ್ಕಾಗಿ ನಾವು ಇಷ್ಟೆಲ್ಲ ಮಾಡಿದ್ದರೂ ನಾವು ಬಿಜೆಪಿ ಜತೆ ಕೈ ಜೋಡಿಸಿದ್ದೇವೆ ಎನ್ನುತ್ತಾರೆ. ಇದು ಸರಿಯಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಜೀನಾಮೆ ಕೊಡಲು ಸಿದ್ಧ
ಪತ್ರ ಬರೆದ 23 ನಾಯಕರು ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂಬ ರಾಹುಲ್ ಹೇಳಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ನ ಮತ್ತೊಬ್ಬ ನಾಯಕ ಗುಲಾಂ ನಬೀ ಆಜಾದ್ ಅವರು ಕೂಡ ಗರಂ ಆಗಿದ್ದಾರೆ. ಬಿಜೆಪಿ ಆಜ್ಞೆಯಂತೆ ನಾವು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿಲ್ಲ. ನಾವು ಬಿಜೆಪಿಗೆ ಸಹಾಯ ಮಾಡಲು ಪತ್ರ ಬರೆದಿಲ್ಲ. ಒಂದು ವೇಳೆ ಬಿಜೆಪಿ ಆಜ್ಞೆಯಂತೆ ಪತ್ರ ಬರೆದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ ಎಂದು CWC ಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರು ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಸಿಡಬ್ಲ್ಯೂಸಿಯಲ್ಲಿ ಗೊಂದಲ
ರಾಹುಲ್ ಗಾಂಧಿ ಆಡಿದ್ದಾರೆ ಎನ್ನಲಾದ ಮಾತುಗಳ ಬಗ್ಗೆ ಕಪಿಲ್ ಸಿಬಲ್, ಗುಲಾಂ ನಬೀ ಆಜಾದ್ ಸೇರುದಂತೆ ಹಲವು ನಾಯಕರು ಗರಂ ಆಗಿದ್ದರು. ಅದರಿಂದ ಸಭೆಯಲ್ಲಿ ಗೊಂದಲವೂ ಆಗಿತ್ತು. ಇದೀಗ ಮತ್ತೆ ರಾಹುಲ್ ಗಾಂಧಿ ಅವರು ನಾನು ಹಾಗೆ ಮಾತಣಾಡಿಲ್ಲ ಎಂದಿದ್ದಾರೆ. ಹೀಗಾಗಿ ರಾಹುಲ್ ಮಾತು ವಿರೋಧಿಸಿ ಮಾಡಿದ್ದ ಟ್ವೀಟ್ನ್ನು ಕಪಿಲ್ ಸಿಬಲ್ ಅಳಿಸಿ ಹಾಕಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಸೋನಿಯಾ ಗಾಂಧಿಗೆ ಪತ್ರ
ಗೊಂದಲದ ಮಧ್ಯೆಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಗಾಂಧಿ ಕುಟುಂಬದಿಂದ ಮಾತ್ರ ಕಾಂಗ್ರೆಸ್ ಪಕ್ಷ ಉಳಿಸಲು ಸಾಧ್ಯವಾಗುತ್ತದೆ. ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಸೋನಿಯಾ ಗಾಂಧಿ ಅವರನ್ನು ವಿನಂತಿಸಿಕೊಂಡಿದ್ದಾರೆ.
ನೀವು ಮುಂದುವರಿಯದಿದ್ದರೆ ರಾಹುಲ್ ಗಾಂಧಿ ಅವರನ್ನೇ ಎಐಸಿಸಿ ಅಧ್ಯಕ್ಷರನ್ನಾಗಿ ಮುಂದುವರೆಸಬೇಕು. ಇದೇ ಮೊದಲ ಬಾರಿ ಪಕ್ಷ ಸಂಕಷ್ಟಕ್ಕೆ ಸಿಲುಕಿಲ್ಲ. ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ನಿಮ್ಮ ಕುಟುಂಬ ಪಕ್ಷವನ್ನು ಮೇಲಕ್ಕೆ ತಂದಿದೆ. ಸಂಕಷ್ಟವನ್ನು ಮೆಟ್ಟಿನಿಲ್ಲೋದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮುಂದುವರೆದಿದೆ.