ರಾಹುಲ್ ಗಾಂಧಿ ಹಾಗೆ ಹೇಳಿಯೇ ಇಲ್ಲ: ಉಲ್ಟಾ ಹೊಡೆದ ಕಾಂಗ್ರೆಸ್ ನಾಯಕರು
ನವದೆಹಲಿ, ಆಗಸ್ಟ್ 24: ಪಕ್ಷದ ನಾಯಕತ್ವದ ಬದಲಾವಣೆಗೆ ಆಗ್ರಹಿಸಿ ಕೆಲವು ಹಿರಿಯ ಮುಖಂಡರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರ ಪಕ್ಷದೊಳಗೆ ಕೋಲಾಹಲ ಸೃಷ್ಟಿಸಿದೆ. ಸೋಮವಾರ ಆರಂಭವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಸುಮಾರು 20 ನಾಯಕರ ಸಹಿಯುಳ್ಳ ಪತ್ರ ಬರೆದಿದ್ದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಬಿಜೆಪಿಯೊಳಗೆ ಸೇರಿಕೊಂಡು ಷಡ್ಯಂತ್ರ ನಡೆಸಿರುವ ಕೆಲವು ಭಿನ್ನಮತೀಯರು ಈ ಪತ್ರ ಬರೆಯುವ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದು ತಾಯಿ ಸೋನಿಯಾ ಗಾಂಧಿಗೆ ನೋವನ್ನುಂಟುಮಾಡಿದೆ ಎಂದೂ ಹೇಳಿದ್ದರು ಎನ್ನಲಾಗಿದೆ.
ಬಿಜೆಪಿ ಜತೆಗೆ ಸೇರಿದ ಭಿನ್ನಮತೀಯರ ಷಡ್ಯಂತ್ರ: ಪಕ್ಷದ ನಾಯಕರ ವಿರುದ್ಧವೇ ರಾಹುಲ್ ಗಾಂಧಿ ಆರೋಪ
ಆದರೆ ಈ ಅರ್ಥ ಕೊಡುವಂತಹ ಯಾವುದೇ ಪದವನ್ನು ರಾಹುಲ್ ಗಾಂಧಿ ಬಳಕೆ ಮಾಡಿಲ್ಲ ಎಂದು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಮತ್ತೊಬ್ಬ ಮುಖಂಡ ಕಪಿಲ್ ಸಿಬಲ್ ಕೂಡ ಈ ರೀತಿಯ ವರದಿಗಳನ್ನು ನಿರಾಕರಿಸಿದ್ದಾರೆ.
ಆದರೆ ಸ್ವತಃ ಕಪಿಲ್ ಸಿಬಲ್ ಅವರು ಮಾಡಿದ್ದ ಟ್ವೀಟ್ ಇದರ ಸುತ್ತಲೂ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ರಾಹುಲ್ ಗಾಂಧಿ ಆಡಿದ್ದರೆನ್ನಲಾದ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದರು. ಕೆಲವು ಸಮಯದ ಅವರು ಆ ಟ್ವೀಟ್ ಅಳಿಸಿ ಹಾಕಿ, ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಮುಂದೆ ಓದಿ.
ಭಿನ್ನಮತೀಯರ ಬಗ್ಗೆ ಕಿಡಿಕಾರಿದ ಮಾಜಿ ಸಂಸದೆ ರಮ್ಯಾ
ಆದರೂ ನಾವು ಬಿಜೆಪಿ ಜತೆಗಿದ್ದೇವೆ!
'ರಾಹುಲ್ ಗಾಂಧಿ ಹೇಳುತ್ತಾರೆ, ನಾವು ಬಿಜೆಪಿ ಜತೆ ಸೇರಿ ಸಂಚು ಮಾಡಿದ್ದೇವೆ ಎಂದು. ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡು ರಾಜಸ್ಥಾನ ಹೈಕೋರ್ಟ್ನಲ್ಲಿ ಯಶಸ್ಸು ಗಳಿಸಿದ್ದು, ಬಿಜೆಪಿ ಸರ್ಕಾರವನ್ನು ಕೆಳಕ್ಕಿಳಿಸಲು ಮಣಿಪುರದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು. ಯಾವುದೇ ವಿಚಾರದಲ್ಲಿ ಕಳೆದ 30 ವರ್ಷಗಳಲ್ಲಿ ಬಿಜೆಪಿ ಪರ ನಾನು ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ. ಆದರೂ ನಾವು ಬಿಜೆಪಿ ಜತೆ ಸೇರಿಕೊಂಡಿದ್ದೇವೆ' ಎಂದು ಕಪಿಲ್ ಸಿಬಲ್, ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಹಾಗೆ ಹೇಳಿಯೇ ಇಲ್ಲ
ಬಳಿಕ ಅವರು ಈ ಟ್ವೀಟ್ ಅನ್ನು ಅಳಿಸಿ ಹಾಕಿದ್ದು, ಅದಕ್ಕೆ ಸ್ಪಷ್ಟೀಕರಣವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. 'ತಾವು ಹೇಳಿದ್ದೆಂದು ಉಲ್ಲೇಖಿಸಲಾಗುತ್ತಿರುವ ಹೇಳಿಕೆಯನ್ನು ನೀಡಿಯೇ ಇಲ್ಲ ಎಂದು ರಾಹುಲ್ ಗಾಂಧಿ ಅವರು ವೈಯಕ್ತಿಕವಾಗಿ ನನಗೆ ತಿಳಿಸಿದ್ದಾರೆ. ಹೀಗಾಗಿ ನನ್ನ ಟ್ವೀಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದೇನೆ' ಎಂದು ಸಿಬಲ್ ಹೇಳಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಸೋನಿಯಾ
ಸುಳ್ಳು ವರದಿ ನಂಬಬೇಡಿ
'ರಾಹುಲ್ ಗಾಂಧಿ ಅವರು ಈ ಅರ್ಥ ಬರುವ ಅಥವಾ ಅದಕ್ಕೆ ಸಂಬಂಧಿಸಿದಂತಹ ಒಂದೂ ಪದವನ್ನು ಹೇಳಿಲ್ಲ. ಮಾಧ್ಯಮಗಳ ಸುಳ್ಳು ವರದಿಗಳಿಂದ ಅಥವಾ ಹರಿದಾಡುತ್ತಿರುವ ತಪ್ಪು ವದಂತಿಗಳಿಂದ ದಾರಿ ತಪ್ಪಬೇಡಿ. ಆದರೆ, ನಾವು ಪರಸ್ಪರ ಕಿತ್ತಾಡಿಕೊಳ್ಳುವ ಮತ್ತು ಒಬ್ಬರನ್ನೊಬ್ಬರು ಹಾಗೂ ಕಾಂಗ್ರೆಸ್ಗೆ ಗಾಸಿ ಮಾಡುವ ಬದಲು ಮೋದಿಯ ದಾರ್ಷ್ಟ್ಯ ಆಡಳಿತದ ವಿರುದ್ಧ ಒಟ್ಟಾಗಿ ಹೋರಾಟ ನಡಸಬೇಕಿದೆ' ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ರಾಜೀನಾಮೆ ನೀಡುತ್ತೇನೆ
ಪಕ್ಷದ ಹಿರಿಯ ಮುಖಂಡ, ರಾಜ್ಯಸಭೆ ಸದಸ್ಯ ಗುಲಾಂ ನಬಿ ಆಜಾದ್ ಕೂಡ ರಾಹುಲ್ ಹೇಳಿದ್ದರೆನ್ನಲಾದ ಹೇಳಿಕೆಗೆ ತಮ್ಮ ಮುನಿಸು ವ್ಯಕ್ತಪಡಿಸಿದ್ದರು. ನಾವು ಬಿಜೆಪಿ ಜತೆ ಸೇರಿಕೊಂಡಿದ್ದೇವೆ ಎಂಬುದು ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಅವರು ಸವಾಲು ಹಾಕಿದ್ದಾರೆ.