ಆರೆಸ್ಸೆಸ್ ಹೇಳಿದಂತೆ ಸ್ಪೀಕರ್ ಥೈ ಥೈ ಕುಣಿಯುತ್ತಾರೆ: ಸಿದ್ದರಾಮಯ್ಯ
ನವದೆಹಲಿ, ಅಕ್ಟೋಬರ್ 16: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗೆ ನವದೆಹಲಿಗೆ ತೆರಳಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಉಪ ಚುನಾವಣೆ; ಸಿದ್ದರಾಮಯ್ಯ ತಂತ್ರದಿಂದ ಬಿಜೆಪಿಗೆ ಸಂಕಷ್ಟ!
'ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಶವಕೃಪದ ಆರೆಸ್ಸೆಸ್ ಮುಖಂಡರ ಸೂಚನೆಯಂತೆ ಥೈಥೈ ಕುಣಿಯುತ್ತಾರೆ. ವಿಧಾನಸಭೆ ಅಧಿವೇಶನದಲ್ಲಿ ನನಗೂ ಅವರಿಗೂ ಮಾತುಕತೆ ನಡೆಯಿತು. ಇಷ್ಟೇ. ವಿರೋಧಪಕ್ಷದ ನಾಯಕರಿಗೆ ಸಮಯ ಮಿತಿ ನೀಡಿ, ಇಷ್ಟರಲ್ಲಿಯೇ ನಿಮ್ಮ ಮಾತು ಮುಗಿಸಬೇಕು ಎಂದು ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಈ ರೀತಿ ಪ್ರತಿಪಕ್ಷ ನಾಯಕರಿಗೆ ಸಮಯ ಮಿತಿ ಹೇರಿದ್ದನ್ನು ನಾನು ಇದುವರೆಗೂ ನೋಡಿಯೇ ಇಲ್ಲ. ನಾನು ಸಿಎಂ ಆಗಿದ್ದಾಗ ವಿರೋಧಪಕ್ಷದವರಿಗೆ ಸಮಯ ಕೊಟ್ಟು ಮಾತನಾಡಲಿ ಎನ್ನುತ್ತಿದ್ದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ನಿರ್ಬಂಧಕ್ಕೆ ವಿಧಿಸುವುದಕ್ಕೆ ಅವಕಾಶವಿಲ್ಲ' ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಸರ್ಕಾರ ಸತ್ತಿದೆ. ಅದಕ್ಕೆ ಕಣ್ಣಿಲ್ಲ, ಕಿವಿ ಇಲ್ಲ. ಪಂಚೇಂದ್ರಿಯಗಳೂ ಇಲ್ಲ. ಇದು ಜನರ ಆಶೀರ್ವಾದದಿಂದ ಬಂದ ಸರ್ಕಾರವಲ್ಲ. ಅನೈತಿಕ ಮಾರ್ಗದಿಂದ ರಚನೆಯಾದ ಸರ್ಕಾರ ಎಂದು ಅರೋಪಿಸಿದರು.
ಅನರ್ಹ ಶಾಸಕರ ಸೇರ್ಪಡೆ ಸಾಧ್ಯವೇ ಇಲ್ಲ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮ್ಮಿಶ್ರ ಸರ್ಕಾರ ಪತನಗೊಳಿಸಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ, ಅನರ್ಹ ಶಾಸಕರ ಕಾಂಗ್ರೆಸ್ ಮರುಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು. ಅದನ್ನು ಪಕ್ಷ ಒಪ್ಪಿಕೊಳ್ಳುತ್ತದೆ. ಆದರೆ ಇದು ಬೇರೆ ಪ್ರಕರಣ. ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ಗೆ ಪತ್ರ ಬರೆದು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಹೀಗಿರುವಾಗ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುಳ್ಳು ಹೇಳಿ ಅಧಿವೇಶನ ಮೊಟಕು
ಬಿಜೆಪಿ ತನ್ನ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ವಿಧಾನಸಭೆ ಅಧಿವೇಶನವನ್ನು ಹೆಚ್ಚು ದಿನ ನಡೆಸಲು ಬಿಡಲಿಲ್ಲ. ಚರ್ಚೆ ಮಾಡದೆಯೇ ಬಜೆಟ್ ಪಾಸ್ ಮಾಡಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಕಾರ್ಯದಲ್ಲಿ ಭಾಗಿಯಾಗಬೇಕು. ಹೀಗಾಗಿ ಮೂರು ದಿನ ಅಧಿವೇಶನ ಸಾಕು ಎಂದು ಸುಳ್ಳು ಹೇಳಿದರು. ಈಗ ಒಬ್ಬ ಸಚಿವರಾದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿದ್ದಾರಾ? ಅಸೆಂಬ್ಲಿಯಲ್ಲಿ ಸುಳ್ಳು ಹೇಳುವುದು ಜನರಿಗೆ ಸುಳ್ಳು ಹೇಳಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಜೊತೆ ಸಿದ್ದರಾಮಯ್ಯ ಮಹತ್ವದ ಚರ್ಚೆ
ಚರ್ಚೆ ನಡೆಸಿದ್ದರೆ ಹುಳುಕು ಬಯಲು
ಅಧಿವೇಶನದಲ್ಲಿ ಡಿಮ್ಯಾಂಡ್ಸ್ ಮೇಲೆ ಚರ್ಚೆ ಆಗಬೇಕಿತ್ತು. ಪ್ರವಾಹದ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕಿತ್ತು. ಡಿಮ್ಯಾಂಡ್ಗಳ ಕುರಿತು ಚರ್ಚೆ ನಡೆದಿದ್ದರೆ ಪ್ರತಿ ಇಲಾಖೆ ಮೇಲೆ ಚರ್ಚೆ ಆಗಬೇಕಿತ್ತು. ಆಗ ಅದರಲ್ಲಿನ ಹುಳುಕುಗಳನ್ನು ಹೊರಗೆಡವುತ್ತಿದ್ದೆವು. ಆದರೆ ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ಅಧಿಕಾರಿಗಳ ವರ್ಗಾವಣೆ ದಂಧೆ, ವ್ಯಾಪಾರ ಇವೆಲ್ಲ ಹೊರಬರುತ್ತಿತ್ತು. ಇದನ್ನೆಲ್ಲ ತಪ್ಪಿಸಲು ಪ್ರವಾಹ ಕಾರ್ಯದ ನೆಪವೊಡ್ಡಿದ್ದರು ಎಂದು ಆರೋಪಿಸಿದರು.
ರೌಡಿಶೀಟರ್ ಗೊತ್ತಾಗೋದು ಹೇಗೆ?
ಕೆಪಿಸಿಸಿ ಕಚೇರಿಯಲ್ಲಿ ರೌಡಿಶೀಟರ್ ಇಷ್ತಿಯಾಕ್ ಕಾಣಿಸಿಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಚೇರಿಗೆ ಬಂದವರಲ್ಲಿ ರೌಡಿಶೀಟರ್ ಯಾರೆಂದು ಹೇಗೆ ಗೊತ್ತಾಗುತ್ತದೆ? ಆತ ಬಂದಾಗ ಭೇಟಿಯಾದರೆ ತಪ್ಪೇನು? ವೇಣುಗೋಪಾಲ್ ಅವರಿಗೆ ರೌಡಿಶೀಟರ್ ಎಂದು ಗೊತ್ತಿರುತ್ತದೆಯೇ? ಯಾರೋ ಭೇಟಿಗೆ ಬಂದಾಗ ಅದರಲ್ಲಿ ರೌಡಿಶೀಟರ್ ಇದ್ದರೆ ನನಗೂ ಗೊತ್ತಾಗುವುದಿಲ್ಲ. ಗೊತ್ತಾದರೆ ನಾನೇನು ಮಾಡಬೇಕು? ಕುತ್ತಿಗೆ ಹಿಡಿದು ತಳ್ಳಬೇಕಾ? ಮಾನವೀಯತೆ ಅಲ್ಲ ಅದು. ಅವನು ರೌಡಿಶೀಟರ್ ಎಂದು ತಿಳಿದಿದ್ದರೂ ಪಕ್ಷದಲ್ಲಿ ಸ್ಥಾನ ನೀಡಿದರೆ ತಪ್ಪು ಎಂದು ಹೇಳಿದರು.