ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ; ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 14; ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭಾರತ ಬಚಾವೋ ಪ್ರತಿಭಟನಾ ರಾಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಆಕ್ರೋಶದಿಂದ ಮಾತನಾಡಿರುವ ರಾಹುಲ್ ಗಾಂಧಿ, 'ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ. ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ' ಎಂದು ಹೇಳಿದ್ದಾರೆ. 'ಉನ್ನಾವೋ ಹಾಗೂ ತೆಲಂಗಾಣ ಪಶುವೈದ್ಯೆಯ ಹತ್ಯಾಚಾರದ ನಂತರ ಭಾರತದ ನಾರಿಯರು ಬೆಚ್ಚಿ ಬಿದ್ದಿದ್ದಾರೆ. ದಿನಕ್ಕೆ ಲೆಕ್ಕವಿಲ್ಲದಷ್ಟು ಮಹಿಳಾ ದೌರ್ಜನ್ಯಗಳು ಬಿಜೆಪಿ ಆಡಳಿತವಿರುವ ರಾಜ್ಯದಲ್ಲೇ ನಡೆಯುತ್ತಿವೆ. ಅದಕ್ಕೋಸ್ಕರವೇ ನಾನು ರೇಪ್ ಇನ್ ಇಂಡಿಯಾ ಹೇಳಿಕೆ ಕೊಟ್ಟಿರುವುದು. ಇದಕ್ಕಾಗಿ ಬಿಜೆಪಿ ಬಳಿ ತಲೆ ತಗ್ಗಿಸುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದರು.
'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದ ರಾಹುಲ್ ಗಾಂಧಿ
ಬ್ರಟೀಷ್ ಸರ್ಕಾರದಲ್ಲಿ ಬಂಧನಕ್ಕೊಳಗಾಗಿದ್ದ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ರನ್ನು ಬ್ರಿಟೀಷ್ ಸರ್ಕಾರ ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿ ಮಾಡಿತ್ತು. ನಂತರ ಸ್ವಾತಂತ್ರ್ಯ ಹೋರಾಟಗಾರರ ತೀವ್ರ ವಿರೋಧ ನಡುವೆ ಅವರ ಗಲ್ಲನ್ನು ರದ್ದು ಮಾಡಿ, ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲವರು ವೀರ ಸಾವರ್ಕರ್ ಬ್ರಿಟೀಷರ ಸರ್ಕಾರದ ಬಳಿ ಕ್ಷಮೆ ಕೇಳಿ ಜೈಲಿನಿಂದ ಬಿಡುಗಡೆಯಾಗಿ ಬಂದರು ಎಂದು ಆರೋಪಿಸಿದ್ದರು. ಇದನ್ನೇ ಉಲ್ಲೇಖ ಮಾಡಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಕುಂಠಿತಗೊಂಡಿರುವ ಆರ್ಥಿಕ ಅಭಿವೃದ್ಧಿ ಖಂಡಿಸಿ ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಭಾರತ್ ಬಚಾವೋ ಎಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, ವೇದಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪಿ.ಚಿದಂಬರಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ತಕ್ತಪಡಿಸಿ, ಭಾರತ್ ಬಚಾವೋ ಎಂದು ಕಹಳೆ ಮೊಳಗಿಸಿದ್ದಾರೆ.