Breaking: ಬ್ಲಾಕ್ ಮ್ಯಾಜಿಕ್ ಟೀಕೆ; ಮೋದಿ ವಿರುದ್ಧ ರಾಹುಲ್ ಕಿಡಿ
ನವದೆಹಲಿ, ಆಗಸ್ಟ್ 11: ಪ್ರಧಾನಿ ನರೇಂದ್ರ ಮೋದಿಯವರ ಕಾಲಾ ಜಾದು(ಬ್ಲಾಕ್ ಮ್ಯಾಜಿಕ್) ಗೇಲಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ಆಗಸ್ಟ್ 5 ರಂದು ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ಮೋದಿ 'ಕಾಲಾ ಜಾದು' ಎಂದು ಗೇಲಿ ಮಾಡಿದ್ದರು.
'ನಿಮ್ಮ ಶೋಷಣೆಗಳನ್ನು ಮರೆಮಾಚಲು 'ಕಾಲ ಜಾದು' ಎಂಬ ಮೂಢನಂಬಿಕೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
"ಪ್ರಧಾನ ಮಂತ್ರಿ ಜೀ, ಪ್ರಧಾನಿ ಹುದ್ದೆಯ ಘನತೆಯನ್ನು ಕೆಳಗಿಳಿಸುವುದನ್ನು ಮತ್ತು ದೇಶವನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಜನರ ಸಮಸ್ಯೆಗಳಿಗೆ ನೀವು ಉತ್ತರ ಕೊಡಲೇಬೇಕು" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅನ್ನು ಹೆಸರಿಸದೆ, ಪ್ರಧಾನಿ ಮೋದಿ ಬುಧವಾರ ಕಾಂಗ್ರೆಸ್ ಮತ್ತು ಅದರ ಆಗಸ್ಟ್ 5 ರ ಪ್ರತಿಭಟನೆಯ ಮೇಲೆ ವಾಗ್ದಾಳಿ ಮಾಡಿದ್ದರು. 'ಕೆಲವರು ತಮ್ಮ ಹತಾಶೆಯನ್ನು ಹೊರಹಾಕಲು ಆಗಸ್ಟ್ 5 ರಂದು 'ಬ್ಲಾಕ್ ಮ್ಯಾಜಿಕ್' ಅನ್ನು ಆಶ್ರಯಿಸಿದ್ದಾರೆ ಎಂದು ಗೇಲಿ ಮಾಡಿದ್ದರು.
ಜೈರಾಮ್ ರಮೇಶ್, ರಣದೀಪ್ ಸುರ್ಜೇಲಾ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಆಗಸ್ಟ್ 5 ರಂದು, ಕೆಲವರು "ಬ್ಲಾಕ್ ಮ್ಯಾಜಿಕ್" ಅನ್ನು ಹೇಗೆ ಹರಡಲು ಪ್ರಯತ್ನಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ತಮ್ಮ ಹತಾಶೆಯನ್ನು ಕೊನೆಗೊಳಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಮಾಚಾರ, ಮಾಟಮಂತ್ರ ಮತ್ತು ಮೂಢನಂಬಿಕೆಗಳಲ್ಲಿ ತೊಡಗುವುದರಿಂದ ಅವರು ಜನರ ವಿಶ್ವಾಸವನ್ನು ಮತ್ತೆ ಗಳಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿಲ್ಲ" ಎಂದು ಮೋದಿ ಹೇಳಿದ್ದರು.
ಜೊತೆಗೆ ಬ್ಲಾಕ್ ಮ್ಯಾಜಿಕ್ ಕೆಟ್ಟ ದಿನಗಳನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.
ಆಗಸ್ಟ್ 5 ರಂದು ಕಾಂಗ್ರೆಸ್ ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿತು. ರಾಮ ಮಂದಿರದ ಭೂಮಿ ಪೂಜೆಯ ಎರಡು ವರ್ಷಗಳ ವಾರ್ಷಿಕೋತ್ಸವವಾಗಿರುವುದರಿಂದ ಕಾಂಗ್ರೆಸ್ ತಮ್ಮ ಕಪ್ಪು ಪ್ರತಿಭಟನೆಗೆ ಆಗಸ್ಟ್ 5 ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕ ಹೇಳಿದ ನಂತರ ಪ್ರತಿಭಟನೆಯು ಟೀಕೆಗೆ ಗುರಿಯಾಗಿತ್ತು.
ಪ್ರಧಾನಿ ಮೋದಿಯವರ 'ಬ್ಲಾಕ್ ಮ್ಯಾಜಿಕ್' ಟೀಕೆಗೆ ಬುಧವಾರದಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಪ್ಪು ಬಟ್ಟೆಯಲ್ಲಿ ಪ್ರಧಾನಿ ಮೋದಿಯವರ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು.
"ಕಪ್ಪುಹಣ ತರಲು ಅವರು ಏನನ್ನೂ ಮಾಡಲಿಲ್ಲ, ಈಗ ಅವರು ಕಪ್ಪು ಬಟ್ಟೆಯ ಬಗ್ಗೆ ಅರ್ಥಹೀನ ವಿಷಯ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡಬೇಕೆಂದು ದೇಶ ಬಯಸುತ್ತಿದೆ. ಆದರೆ 'ಜುಮ್ಲಾಜೀವಿ' ಏನೇನ್ನೂ ಹೇಳುತ್ತಲೇ ಇರುತ್ತಾರೆ" ಎಂದು ಜೈರಾಮ್ ರಮೇಶ್ ಹೇಳಿದ್ದರು.
Recommended Video
'ಕಪ್ಪು ಬಟ್ಟೆಯಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಜನರಿಗೆ ಸಮಸ್ಯೆಗಳಿವೆ' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.