ಇದು ಭದ್ರತಾ ವೈಫಲ್ಯವಲ್ಲದೇ ಮತ್ತೇನು?; ರಾಹುಲ್ ಪ್ರಶ್ನೆ
ನವದೆಹಲಿ, ಏಪ್ರಿಲ್ 5: ಛತ್ತೀಸ್ಗಡದ ಬಿಜಾಪುರದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಸಂದರ್ಭ 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಈ ಕಾರ್ಯಾಚರಣೆ ಅಸಮರ್ಥವಾಗಿದೆ. ಇದರ ರೂಪುರೇಷೆಯೇ ಸೂಕ್ತವಾಗಿಲ್ಲ ಎಂದು ಟೀಕಿಸಿದ್ದಾರೆ.
ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, "ಈ ಕಾರ್ಯಾಚರಣೆ ಅಸಮರ್ಥವಾಗಿದೆ" ಎಂದು ದೂರಿದ್ದಾರೆ.
ಗುಪ್ತಚರ ವೈಫಲ್ಯವಾಗಿಲ್ಲ, ಎನ್ಕೌಂಟರ್ನಲ್ಲಿ 30 ಮಂದಿ ನಕ್ಸಲರ ಹತ್ಯೆ
ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಘಟನೆಯಲ್ಲಿ ಯೋಧರು ಸತ್ತಷ್ಟೇ ಸಂಖ್ಯೆಯಲ್ಲಿ ಮಾವೋವಾದಿ ಉಗ್ರರೂ ಸತ್ತಿದ್ದಾರೆ ಎಂಬ ಸಿಆರ್ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, "ಗುಪ್ತದಳದ ವೈಫಲ್ಯವಿಲ್ಲ, ಸತ್ತವರ ಪ್ರಮಾಣ 1:1 ಅನುಪಾತದಂತಿದೆ ಎಂದಾದರೆ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ ಎಂದೇ ಅರ್ಥವಲ್ಲವೇ? ಇದು ಅಸಮರ್ಥ ಕಾರ್ಯಾಚರಣೆಯಲ್ಲದೇ ಮತ್ತೇನು" ಎಂದು ಪ್ರಶ್ನಿಸಿದ್ದಾರೆ.
ನಕ್ಸಲರ ವಿರುದ್ಧ ಕಾರ್ಯಾಚರಣೆ ಅಥವಾ ಗುಪ್ತಚರ ವೈಫ್ಯಲ್ಯವಾಗಿಲ್ಲ, 25ರಿಂದ 30 ನಕ್ಸಲರನ್ನು ಹತ್ಯೆಗೈಯಲಾಗಿದೆ ಎಂದು ಕುಲದೀಪ್ ಸಿಂಗ್ ಹೇಳಿದ್ದರು.
ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿ 31 ಸಿಬ್ಬಂದಿ ಗಾಯಗೊಂಡಿದ್ದರು.