'ಜೈಲು ಹಕ್ಕಿ' ಚಿದು ಹೊಟ್ಟೆನೋವಿನಿಂದ ಏಮ್ಸ್ ಗೆ ತೆರಳಿ, ಡಿಸ್ ಚಾರ್ಜ್
ನವದೆಹಲಿ, ಅಕ್ಟೋಬರ್ 28: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸೋಮವಾರ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ವಾಪಸ್ ತಿಹಾರ್ ಜೈಲಿಗೆ ಕರೆತರಲಾಯಿತು. ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಏಮ್ಸ್ ಗೆ ಕರೆದೊಯ್ಯಲಾಯಿತು. ಆವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದೆ.
ಚಿದಂಬರಂ ಅವರನ್ನು ಅಕ್ಟೋಬರ್ ಮೂವತ್ತನೇ ತಾರೀಕಿನ ತನಕ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಆಗಸ್ಟ್ ಇಪ್ಪತ್ತೊಂದನೇ ತಾರೀಕು ಸಿಬಿಐನಿಂದ ಬಂಧಿತರಾದ ಮೇಲೆ ಈ ತಿಂಗಳು ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತು.
ಪಿ.ಚಿದಂಬರಂ ಗೆ ಜಾಮೀನು: ಆದರೂ ಇಲ್ಲ ಬಿಡುಗಡೆ ಭಾಗ್ಯ
ಅಂದ ಹಾಗೆ ಅಕ್ಟೋಬರ್ ಇಪ್ಪತ್ತೆರಡನೇ ತಾರೀಕು ಐಎನ್ ಎಕ್ಸ್ ಮೀಡಿಯಾಗೆ ಸಂಬಂಧಿಸಿದಂತೆ ಸಿಬಿಐನ ಕಸ್ಟಡಿಯಿಂದ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಆದರೆ ಚಿದಂಬರಂ ಈಗ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕಸ್ಟಡಿಯಲ್ಲೇ ಮುಂದುವರಿಯಲಿದ್ದಾರೆ.
ಇ.ಡಿ. ಬಂಧನದಿಂದ ಜಾಮೀನು ಪಡೆಯಲು ಅಕ್ಟೋಬರ್ ಇಪ್ಪತ್ಮೂರನೇ ತಾರೀಕು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು ಚಿದಂಬರಂ. ಕಳೆದ ಎರಡು ತಿಂಗಳಲ್ಲಿ ಎರಡು ಸಲ ಅನಾರೋಗ್ಯಪೀಡಿತ ಆಗಿದ್ದೇನೆ. ಒಂದು ವೇಳೆ ಬಿಡುಗಡೆ ಆಗಲಿಲ್ಲ ಅಂದರೆ ಆರೋಗ್ಯ ಇನ್ನಷ್ಟು ಹದಗೆಡುತ್ತದೆ ಎಂದು ಅವರು ಹೇಳಿದ್ದರು.