ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ; ಗುಲಾಂ ನಬಿ
ನವದೆಹಲಿ, ಫೆಬ್ರುವರಿ 12: ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್ ಅವರು ಬಿಜೆಪಿ ಸೇರುವರೆಂಬ ವದಂತಿ ಹರಡಿದ್ದು, ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿದಾಯ ಭಾಷಣ ಮಾಡಿದ್ದು, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದ್ದರು. "ಗುಲಾಂ ನಬಿ ನನ್ನ ನಿಜ ಸ್ನೇಹಿತ" ಎಂದು ಕಣ್ಣೀರು ಹಾಕಿದ್ದರು. ಪಕ್ಷದ ಬಗ್ಗೆ ಮಾತ್ರವಲ್ಲದೇ ದೇಶದ ಬಗ್ಗೆ ಅವರು ಚಿಂತಿಸುತ್ತಿದ್ದರು ಎಂದು ಹೊಗಳಿದ್ದರು. ಅವರಿಗೆ ಪ್ರತಿಯಾಗಿ, "ಮೋದಿಯವರು ತಮ್ಮ ವಿರುದ್ಧದ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುತ್ತಿದ್ದರು. ಎಷ್ಟೋ ಬಾರಿ ನಾವು ವಾಗ್ಯುದ್ಧ ನಡೆಸಿದ್ದೇವೆ. ಆದರೆ ಮೋದಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಿಲ್ಲ" ಎಂದು ಆಜಾದ್ ಧನ್ಯವಾದ ಸಲ್ಲಿಸಿದ್ದರು.
ಹಿಂದೂಸ್ತಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ; ಗುಲಾಂ ನಬಿ ಆಜಾದ್
ಬಿಜೆಪಿ ನಾಯಕ ದಿ.ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಒಡನಾಟದ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿದ್ದರು. ಆನಂತರ ಗುಲಾಂ ನಬಿ ಆಜಾದ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಈ ವದಂತಿ ಕುರಿತು ಪ್ರತಿಕ್ರಿಯೆ ನೀಡಿರುವ ಗುಲಾಂ ನಬಿ ಆಜಾದ್, "ಕಾಶ್ಮೀರದಲ್ಲಿ ಯಾವಾಗ ಕಪ್ಪು ಹಿಮ ಬೀಳುತ್ತದೋ ಆಗ ನಾನು ಬಿಜೆಪಿ ಸೇರುತ್ತೇನೆ" ಎಂದು ಹೇಳಿದ್ದಾರೆ.
ಮೋದಿ ಅವರು ನನಗೆ 90ರ ದಶಕದಿಂದಲೂ ತಿಳಿದಿದ್ದಾರೆ. ಕೆಲವು ಟಿವಿ ಚರ್ಚೆಗಳಲ್ಲೂ ನಾವು ಭಾಗವಹಿಸಿದ್ದೆವು. ಜಗಳ ಆಡುತ್ತಿದ್ದೆವು, ಒಟ್ಟಿಗೆ ಟೀ ಕುಡಿಯುತ್ತಿದ್ದೆವು. ಹಾಗೆಂದು ನಾನು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಜಾದ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದು, ಪಕ್ಷದ ಕಾರ್ಯದರ್ಶಿಯಾಗಿ ಆಜಾದ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಈಚೆಗೆ ರಾಹುಲ್ ಗಾಂಧಿ ಅವರನ್ನು ಗುಲಾಂ ನಬಿ ಆಜಾದ್ ಅವರು ಭೇಟಿಯಾಗಿದ್ದಾರೆ.