ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಗೆ ಎದಿರೇಟು ಕೊಡಲು ಕಾಂಗ್ರೆಸ್ ಭಾರಿ ಪ್ಲಾನ್!
ಬೆಂಗಳೂರು, ಫೆ. 11: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರು ಮೊನ್ನೆ ಫೆಬ್ರುವರಿ 9ರಂದು ರಾಜ್ಯಸಬೆ ಸದಸ್ಯತ್ವದಿಂದ ನಿವೃತ್ತರಾದರು. ಆಗ ಪ್ರಧಾನಿ ಮೋದಿ ಮಾಡಿದ ಭಾವುಕ ಭಾಷಣ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಗುಲಾಂ ನಬಿ ಆಜಾದ್ ಅವರ ಹಿರಿತನ, ರಾಜಕೀಯ ಜಾಣ್ಮೆಯನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ಅವರು, ಆಜಾದ್ ಅವರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ಭಾವುಕ ಭಾಷಣ ಮಾಡಿದ್ದರು.
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ, ಕೇಂದರ ಸಚಿವ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಸೇತಿದಂತೆ ಅನೇಕ ಉನ್ನತ ಹುದ್ದೆಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಜೀವನದಲ್ಲಿ ಅಧಿಕಾರ, ಹುದ್ದೆ ಎಲ್ಲವೂ ಬರುತ್ತವೆ, ಹೋಗುತ್ತವೆ. ಆದರೆ ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಾವು ಹಿರಿಯರಾದ ಗುಲಾಂ ನಬಿ ಆಜಾದ್ ಅವರಿಂದ ಕಲಿಯಬೇಕು ಎಂದು ರಾಜ್ಯಸಭೆಯಲ್ಲಿ ಸೆಲ್ಯೂಟ್ ಮಾಡಿದ್ದರು. ಆಜಾದ್ ಅವರ ಸೇವೆ ನೆನೆಯುವಾಗ ಪ್ರಧಾನಿ ಮೋದಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದು ಇಡೀ ದೇಶದ ಗಮನ ಸೆಳೆದಿತ್ತು. ಜೊತೆಗೆ ನಮ್ಮ ರಾಜಕೀಯ ಪರಂಪರೆ ಹೇಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಇಡೀ ಜಗತ್ತಿಗೆ ತೋರಿಸಿತ್ತು.
ಇಷ್ಟೆಲ್ಲ ಆದ ಬಳಿಕ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಎದಿರೇಟು ಕೊಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಲೋಕಸಭೆಯಲ್ಲಿ ಪ್ರಭಾವಿ ವಿಪಕ್ಷ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಆದರೂ ಪ್ರಧಾನಿ ಮೋದಿ ಅವರಿಗೆ ಪ್ರಬಲ ವಿಪಕ್ಷ ನಾಯಕನನ್ನು ಎದುರಿಸುವಂತೆ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಖಾಲಿಯಿದೆ ವಿಪಕ್ಷ ನಾಯಕನ ಸ್ಥಾನ
ರಾಜ್ಯಸಭೆ ಸದಸ್ಯತ್ವದಿಂದ ಗುಲಾಂ ನಬಿ ಆಜಾದ್ ಅವರು ಫೆಬ್ರುವರಿ 9ರಂದು ನಿವೃತ್ತರಾಗುವ ಮೂಲಕ ರಾಜ್ಯಸಭಾ ವಿಪಕ್ಷ ನಾಯಕನ ಸ್ಥಾನ ಖಾಲಿಯಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರಕ್ಕೆ ತಿರುಗೇಟು ಕೊಡುವ ಹಾಗೂ ಚರ್ಚೆ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ನಾಯಕನನ್ನು ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ರಾಜ್ಯಕ್ಕೆ ಮತ್ತೊಂದು ಮಹತ್ವದ ಹುದ್ದೆ ಸಿಗುವ ಸಾಧ್ಯತೆಗಳಿವೆ. ಯಾರಾಗ್ತಾರೆ ರಾಜ್ಯಸಭಾ ವಿಪಕ್ಷ ನಾಯಕ? ಮುಂದಿದೆ ಮಾಹಿತಿ.
ಮುಂದಿನ ವಿಪಕ್ಷ ನಾಯಕ ಯಾರು?
ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮತ್ತೊಂದು ಗದ್ದುಗೆ ಸಿಗುವ ಸಾಧ್ಯತೆಯಿದೆ. ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ಆಯ್ಕೆಯಾಗುವುದು ಬಹುತೇಕ ಅಂತಿಮವಾಗಿದೆ. ಕಳೆದ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ, ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನು ಬಹಳಷ್ಟು ಬಾರಿ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಖರ್ಗೆ ಕಾರಣರಾಗಿದ್ದರು.
ಲೋಕಸಭಾ ಚುನಾವಣೆಯಲ್ಲಿ ಸೋಲು
ಆದರೆ ರಾಜಕೀಯ ತಂತ್ರ ಮಾಡಿದ ಬಿಜೆಪಿ ಈ ಸಲ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸೋಲುವಂತೆ ಮಾಡಿತು ಎಂದು ಕಾಂಗ್ರೆಸ್ ನಾಯಕರು ಈಗಲೂ ಆರೋಪಿಸುತ್ತಾರೆ. ಹೀಗಾಗಿ ಲೋಕಸಭೆಯಲ್ಲಿ ಸೋತಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಪ್ರಧಾನಿ ಮೋದಿ ಅವರಿಗೆ ತಿರುಗೇಟು ಕೊಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿತು.
ಹೀಗಾಗಿ ಈಗ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆಯಿಂದ ನಿವೃತ್ತರಾಗುತ್ತಿದ್ದಂತೆಯೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯಸಭೆ ವಿರೋಧ ಪಕ್ಷ ನಾಯಕರನ್ನಾಗಿ ಮಾಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ಆ ಮೂಲಕ ಮೋದಿ ಅವರನ್ನು ಸಾಧ್ಯವಾದಷ್ಟು ಕಟ್ಟಿಹಾಕುವುದು ಕಾಂಗ್ರೆಸ್ ತಂತ್ರ.
ರಾಜ್ಯಸಭೆಯಲ್ಲಿ ಬಹುಮತ
245 ಸದಸ್ಯರ ಬಲವನ್ನು ಹೊಂದಿರುವ ರಾಜ್ಯಸಭೆಯಲ್ಲಿ ಇನ್ನೂ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲ. ರಾಜ್ಯಸಬೆಯಲ್ಲಿ ಎನ್ಡಿಎ ಮೈತ್ರಿಕೂಟ 117 ಸದಸ್ಯರ ಸಂಖ್ಯಾಬಲ ಹೊಂದಿದೆ. ಹಾಗೆಯೇ ಯುಪಿಎ 119 ಸದಸ್ಯರ ಸಂಖ್ಯಾಬಲ ಹೊಂದಿದ್ದು, 9 ಸ್ಥಾನಗಳು ಖಾಲಿಯಿದೆ. ಎನ್ಡಿಎ ಮೈತ್ರಿಕೂಟ ಬಹುಮತ ಪಡೆಯಲು 2022ರವರೆಗೆ ಯಾಕಬೇಕಿದೆ. 2022ರಲ್ಲಿ ಬಿಜೆಪಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿಯೂ ಬಹುಮತ ಸಿಗಲಿದೆ.
ಆದರೆ ಅಲ್ಲಿಯ ವರೆಗೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಸಭೆಯಲ್ಲಿ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಳ್ಳಲು ಹರಸಾಹಸ ಪಡೆಬೇಕಾದ ಅಗತ್ಯವಿದೆ. ಜೊತೆಗೆ ನುರಿತ ಸಂಸದೀಯ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದಲ್ಲಿ ಮತ್ತಷ್ಟು ಸಂಕಷ್ಟ ಬಿಜೆಪಿ ಸರ್ಕಾರಕ್ಕೆ ಎದುರಾಗಲಿದೆ. ಇದೇ ಲೆಕ್ಕಾಚಾರದಿಂದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಲು ತೀರ್ಮಾನ ಮಾಡಲಾಗಿದೆ.