ನೀವು ಸರ್ಕಾರ ನಡೆಸುತ್ತಿದ್ದೀರಾ, ಸರ್ಕಸ್ ನಡೆಸುತ್ತಿದ್ದೀರಾ; ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಏಪ್ರಿಲ್ 1: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತದ ಆದೇಶವನ್ನು ಸರ್ಕಾರ ಗುರುವಾರ ಹಿಂಪಡೆದುಕೊಳ್ಳುವುದಾಗಿ ಘೋಷಿಸಿದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಾಂಗ್ರೆಸ್ ಟೀಕಿಸಿದೆ.
ಈ ಬೆಳವಣಿಗೆ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, "ಸರ್ಕಾರದ ಬಹುಮುಖ್ಯ ಆದೇಶವೊಂದನ್ನು ಹೊರಡಿಸುವಾಗ ಇಷ್ಟು ಅಜಾಗರೂಕತೆಯೇ? ಅಥವಾ ಇದು ಚುನಾವಣಾ ಬೆಂಬಲಿತ ನಡೆಯಾಗಿತ್ತೇ" ಎಂದು ಪ್ರಶ್ನಿಸಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಆದೇಶವನ್ನು ಹಿಂಪಡೆದ ಸರ್ಕಾರ
ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಕೂಡ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು, "ಮೇಡಂ ನೀವು ಸರ್ಕಾರ ನಡೆಸುತ್ತಿದ್ದೀರಾ, ಸರ್ಕಸ್ ಕಂಪನಿ ನಡೆಸುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಇಂತಹ ಆದೇಶವನ್ನು ಹೊರಡಿಸುವಾಗ ದೇಶದಲ್ಲಿ ಆರ್ಥಿಕತೆಯ ಕಾರ್ಯಚಟುವಟಿಕೆಯನ್ನು ಊಹಿಸಬಹುದು ಎಂದಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಮುಂದುವರೆಯಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ.
ಬುಧವಾರ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ.1.1ರವರೆಗೆ ಬಡ್ಡಿ ಇಳಿಕೆ ಮಾಡಲಾಗಿತ್ತು. ಆದರೆ ಗುರುವಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತದ ಆದೇಶವನ್ನು ಸರ್ಕಾರ ಹಿಂಪಡೆದಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.