ದೆಹಲಿ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಭೇಟಿ
ನವದೆಹಲಿ, ಫೆಬ್ರವರಿ.28: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಹೊತ್ತಿ ಉರಿದ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಶುಕ್ರವಾರ ಭೇಟಿ ನೀಡಲಿದ್ದಾರೆ.
ಜಫ್ರಾಬಾದ್, ಮೌಜ್ ಪುರ್, ಚಾಂದ್ ಬಾಗ್, ಖುರೇಜ್ ಖಾಸ್, ಮತ್ತು ಭಜನ್ ಪುರಗೆ ಭೇಟಿ ನೀಡಲಿರುವ ಲೆಫ್ಟಿನೆಂಟ್ ಗವರ್ನರ್ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಇದುವರೆಗೂ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ದೆಹಲಿ ಹಿಂಸಾಚಾರಿಗಳಿಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ? ಸ್ಫೋಟಕ ಮಾಹಿತಿ
ಐವರು ಸದಸ್ಯರನ್ನೊಳಗೊಂಡ ಕಾಂಗ್ರೆಸ್ ನಿಯೋಗ ಕೂಡಾ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಈ ಕಾಂಗ್ರೆಸ್ ನಿಯೋಗದಲ್ಲಿ ಮುಕುಲ್ ವಾಸ್ನಿಕ್, ತಾರಿಕ್ ಅನ್ವರ್, ಸುಷ್ಮಿತಾ ದೇವ್, ಶಕ್ತಿ ಸಿನ್ಹಾ ಗೋಹಿಲ್ ಮತ್ತು ಕುಮಾರಿ ಸೆಲ್ಜಾ ಇದ್ದಾರೆ.
ಶುಕ್ರವಾರ ಹಿನ್ನೆಲೆ ಮಸೀದಿಗಳ ಬಳಿ ಹೆಚ್ಚಿನ ಭದ್ರತೆ:
ಶುಕ್ರವಾರವಾದ ಹಿನ್ನೆಲೆ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಪ್ರಾರ್ಥನೆಗೆ ತೆರಳಲಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ. ಸೋಮವಾರದಿಂದ ಈಶಾನ್ಯ ಭಾಗದ ಪ್ರದೇಶಗಳಲ್ಲಿ 7 ಸಾವಿರಕ್ಕೂ ಅಧಿಕ ಪ್ಯಾರಾ ಮಿಲಿಟರಿ ಫೋರ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಕಳೆದ 36 ಗಂಟೆಗಳಲ್ಲಿ ಹೇರಿದ್ದ ನಿಷೇಧಾಜ್ಞೆಯನ್ನು ಶುಕ್ರವಾರ 10 ಗಂಟೆಗಳ ಕಾಲ ಕೇಂದ್ರ ಗೃಹ ಸಚಿವಾಲಯವು ಸಡಿಲಗೊಳಿಸಿತ್ತು. ಈ ಸಂದರ್ಭ ಮನೆಯಿಂದ ಹೊರ ಬಂದ ಜನರು ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.